ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಎಕ್ಸ್ ಖಾತೆಯಲ್ಲಿ ಸಮರ ಜೋರಾಗಿದೆ. ಆರ್ಎಸ್ಎಸ್ ವಿರುದ್ಧ ಪೋಸ್ಟ್ ಹಂಚಿಕೊಂಡ ಸಿಎಂ ವಿರುದ್ಧ, ಆರ್.ಅಶೋಕ ಲೇವಡಿ ಮಾಡಿದ್ದಾರೆ. ಇದು ಸಿಎಂ ಕುರ್ಚಿ ಉಳಿಸಿಕೊಳ್ಳಲು ಮಾಡುತ್ತಿರುವ ತಂತ್ರ ಎಂದು ಖಾತರಿಯಾಗಿದೆ ಎಂಬಂತೆ ಟೀಕಿಸಿದ್ದಾರೆ.
79ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಲ್ಲಿ ಮಾತನಾಡಿದ, ಪ್ರಧಾನಿ ಮೋದಿ ಅವರು ಆರ್ಎಸ್ಎಸ್ನ ವಿಶ್ವದ ಅತಿದೊಡ್ಡ NGO ಎಂದಿದ್ದರು. ಅವರ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರ್ಎಸ್ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದೇ ಇದ್ದುದು, ರಾಷ್ಟ್ರಧ್ವಜವನ್ನು ವರ್ಷಗಳ ಕಾಲ ತಮ್ಮ ಕಚೇರಿಯಲ್ಲಿ ಹಾರಿಸದೇ ಇದ್ದುದು, ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಳ್ಳದಿರುವುದು ಎಲ್ಲವೂ ಎಲ್ಲರಿಗೂ ತಿಳಿದಿರುವ ಸತ್ಯ ಎಂದು ಕಟುವಾಗಿ ಟೀಕಿಸಿದ್ದರು.
ಇದಕ್ಕೆ ಎಕ್ಸ್ ಖಾತೆಯಲ್ಲಿ ಖಡಕ್ ಆಗಿ ಪ್ರತಿಕ್ರಿಯೆ ನೀಡಿರುವ, ಬಿಜೆಪಿ ನಾಯಕ ಆರ್. ಅಶೋಕ, ಆರ್ಎಸ್ಎಸ್ ವಿರುದ್ಧ ಮಾತನಾಡುವುದು ಸಿದ್ದರಾಮಯ್ಯ ಅವರ ರಾಜಕೀಯದ ಒಂದು ಭಾಗವಾಗಿಯೇ ಪರಿಣಮಿಸಿದೆ. ಇದು ಸಿದ್ಧಾಂತವಲ್ಲ, ಇದು ಬದುಕುಳಿಯುವ ಪ್ರಯತ್ನ. ಇದು ಧೈರ್ಯವಲ್ಲ, ಇದು ಕುರ್ಚಿ ಉಳಿಸುವ ಖಾತರಿ. ಸಿಎಂ ಸ್ಥಾನದಲ್ಲಿ ಉಳಿಯಲು ಅವರಿಗೆ ಆರ್ಎಸ್ಎಸ್ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಮೂಲಕ ಆರ್ಎಸ್ಎಸ್ ಕುರಿತ ರಾಜಕೀಯ ಚರ್ಚೆ ಮತ್ತೊಮ್ಮೆ ತೀವ್ರಗೊಂಡಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇನ್ನಷ್ಟು ಆರೋಪ–ಪ್ರತಾರೋಪಗಳು ಹೆಚ್ಚಾಗುವ ಸಾಧ್ಯತೆ ಕಂಡುಬರುತ್ತಿದೆ.