ಮಾಜಿ ಸಚಿವ ಕೆ.ಎನ್ ರಾಜಣ್ಣ ಬಿಜೆಪಿ ಸೇರುತ್ತಾರಾ ಎಂಬ ಹೊಸ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ. ಈ ಚರ್ಚೆಗೆ ಇದೀಗ ಕಾಂಗ್ರೆಸ್ ಶಾಸಕ ಎಚ್.ಸಿ ಬಾಲಕೃಷ್ಣ ಕೂಡ ಶೃತಿ ಸೇರಿಸಿದ್ದಾರೆ. ಕೆ.ಎನ್ ರಾಜಣ್ಣ ಅವರು ಬಿಜೆಪಿ ಸೇರಲು ಅರ್ಜಿ ಸಲ್ಲಿಸಿದ್ದಾರೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಅಲ್ಲದೇ ರಾಜಣ್ಣ ತಮ್ಮ ಮಾತುಗಳಿಂದಲೇ ತಾವೇ ಹಾಳಾದರು, ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಮಾತಿದೆ. ಇದರ ಹಿಂದೆ ನಮ್ಮ ಪಕ್ಷದ ನಾಯಕರ ಯಾವುದೇ ಷಡ್ಯಂತ್ರ ಇಲ್ಲ ಎಂದು ಬಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಮೇಲೆ ಸುಮ್ಮನೆ ಗೂಬೆ ಕೂರಿಸಲು ಪಿತೂರಿ ನಡೆಯುತ್ತಿದೆ. ರಾಜಣ್ಣನವರು ದೆಹಲಿಯಲ್ಲಿ ಸಮಾವೇಶ ಮಾಡುವುದಾದರೆ, ಅದನ್ನು ತಡೆಯಲು ನಮಗೆ ಸಾಧ್ಯವಿಲ್ಲ.
ರಾಜಣ್ಣ ಅವರ ಬ್ರೈನ್ ಮ್ಯಾಪಿಂಗ್ ಮಾಡಿದರೆ, ಅವರು ಯಾರ ಸಂಪರ್ಕದಲ್ಲಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಬಾಲಕೃಷ್ಣ ತಿಳಿಸಿದ್ದಾರೆ. ನಮ್ಮದೇ ಸರ್ಕಾರ ಇರುವುದರಿಂದ ರಾಜಣ್ಣ ಇಲ್ಲಿಯೇ ಇದ್ದಾರೆ. ಆದರೆ ಅವರು ಬೇರೆ ಬೇರೆ ಪಕ್ಷದ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಆರೋಪಿಸಿದ್ದಾರೆ.