ಬೆಂಗಳೂರಿನ ಮೆಟ್ರೋ ದರವನ್ನು ಇಳಿಕೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಪಣ ತೊಟ್ಟಂತಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರದ ಬಳಿ ನಮ್ಮ ಮೆಟ್ರೋ ಫೇರ್ ಫಿಕ್ಸೇಷನ್ ರಿಪೋರ್ಟ್ ಇರುವುದೇ ಅನುಮಾನ ಎಂದು ವ್ಯಕ್ತ ಪಡಿಸಿದ್ದಾರೆ. ಈಗಾಗಲೇ ಹಲವು ಬಾರಿ ಫೇರ್ ಫಿಕ್ಸೇಷನ್ ರಿಪೋರ್ಟ್ಅನ್ನು ನೀಡಿ ಎಂದು ಕೇಳಲಾಗಿದೆ. ಇಲ್ಲಿಯವರೆಗೂ ಬಿಎಂಆರ್ಸಿಎಲ್ ಅಧಿಕಾರಿಗಳು ತಕ್ಕ ಉತ್ತರವನ್ನೇ ನೀಡುತ್ತಿದ್ದಾರೆ. ಮೆಟ್ರೋ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲುದಾರಿಕೆ ಆಗಿದ್ದರೂ, ಮೆಟ್ರೋ ದರ ನಿಗದಿಯ ಸಂಪೂರ್ಣ ಹಕ್ಕು ಇರುವುದು ರಾಜ್ಯ ಸರ್ಕಾರಕ್ಕೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ ಎಂದು ಆರೋಪಿಸಿದರು.
ಮೆಟ್ರೋ ದರ ಏರಿಕೆ ವಿಚಾರದ ಬಗ್ಗೆ ಎರಡು ದಿನದ ಹಿಂದೆ ಕೋರ್ಟ್ನಲ್ಲಿ ವಿಚಾರಣೆ ನಡೆದಿದೆ. ರಾಜ್ಯ ಸರ್ಕಾರ ಅಫಿಡೆವಿಟ್ ಸಲ್ಲಿಸಿದ್ದು, ಫೇರ್ ಫಿಕ್ಸೇಷನ್ ರಿಪೋರ್ಟ್ಅನ್ನು ಪಬ್ಲಿಶ್ ಮಾಡುತ್ತೇವೆ ಎಂದು ಹೇಳಿದೆ. ಆದರೆ, ಇದುವರೆಗೂ ಮಾಡಿಲ್ಲ. ಸೆ. 22ಕ್ಕೆ ಕೊನೇ ವಿಚಾರಣೆ ಇದೆ. ಅಷ್ಟರೊಳಗೆ ಸರ್ಕಾರ ರಿಪೋರ್ಟ್ಅನ್ನು ಪಬ್ಲಿಶ್ ಮಾಡಿದರೆ ಬಚಾವ್ ಆಗುತ್ತದೆ. ಇಲ್ಲದೇ ಇದ್ದಲ್ಲಿ ಕೋರ್ಟ್ನಿಂದ ಸರ್ಕಾರ ಛೀಮಾರಿ ಹಾಕಿಸಿಕೊಳ್ಳಲಿದೆ.
ಮೆಟ್ರೋ ದರದ ಏರಿಕೆಯ ವಿಚಾರವಾಗಿ ನಾನು ಕೋರ್ಟ್ ಗೆ ಹೋಗಿದ್ದೆ. ರಾಜ್ಯ ಸರ್ಕಾರ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ದೆಹಲಿ ಮೆಟ್ರೋದಲ್ಲಿ 2-3 ರೂಪಾಯಿ ದರ ಏರಿಕೆ ಮಾಡಿದ್ದಾರೆ. ಆದರೆ ನಮ್ಮಲ್ಲಿ 20 ರೂಪಾಯಿ ಏರಿಕೆಯಾಗಿದೆ. ಮೆಟ್ರೋ ದರ ಏರಿಕೆ ಕೇವಲ ರಾಜ್ಯ ಸರ್ಕಾರದ ನಿರ್ಧಾರ ಮಾತ್ರ. ಬೇರೆ ಬೇರೆ ದೇಶಕ್ಕೆ ಹೋಗಿ ಅಧ್ಯಯನ ಮಾಡಿಕೊಂಡು ಬಂದು ರಿಪೋರ್ಟ್ ಕೊಟ್ಟಿದ್ದೇವೆ ಎಂದಿದ್ದಾರೆ. ಆ ದೇಶಕ್ಕೆ ಹೋಗಿ ಏನೆಲ್ಲಾ ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ ಅನ್ನೋ ಕುತೂಹಲ ನಮಗಿದೆ ಎಂದು ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರದ ಬಳಿ ದರ ನಿಗದಿಯ ವರದಿ ಇದೆಯೋ ಇಲ್ಲವೋ ಅಂತಾ ಅನುಮಾನಶುರುವಾಗಿದೆ. ಅಥವಾ ವರದಿ ಇದ್ದರೆ ಯಾಕೆ ಬಹಿರಂಗ ಮಾಡುತ್ತಿಲ್ಲ? BMRCL ದರ ನಿಗದಿ ವರದಿ ಬಹಿರಂಗ ಮಾಡಲು ಅನುಮತಿ ಕೇಳಿ ಪತ್ರ ಬರೆದಿದೆ. ಆನ್ ಲೈನ್ ನಲ್ಲಿ ಪಬ್ಲಿಷ್ ಮಾಡುವಂತೆ ಜುಲೈನಲ್ಲೇ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಈಗ ಸೆಪ್ಟೆಂಬರ್ ತಿಂಗಳು, ಇನ್ನಾದರೂ BMRCL ರಾಜ್ಯ ಸರ್ಕಾರದ ಪತ್ರವನ್ನು ತೆಗೆದು ನೋಡಿ ವರದಿ ಪಬ್ಲಿಷ್ ಆಗುತ್ತದೆಯೋ ಇಲ್ಲವೋ ನಾವು ನೋಡಬೇಕು. ಇಲ್ಲದಿದ್ದರೆ ಸೆ. 22 ರಂದು ಕೋರ್ಟ್ ನಲ್ಲಿ ಮುಂದಿನ ವಿಚಾರಣೆ ವೇಳೆ ಛೀಮಾರಿ ಹಾಕಿಸಿಕೊಂಡು ದರ ನಿಗದಿಯ ವರದಿ ಬಹಿರಂಗ ಮಾಡಬೇಕಾಗುತ್ತದೆ ಎಂದಿದ್ದಾರೆ.