ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡ ಜಿಎಸ್ಟಿ ದರ ಕಡಿತ ಕ್ರಮ ರಾಜ್ಯಕ್ಕೆ ದೊಡ್ಡ ನಷ್ಟ ತರುವ ಸಾಧ್ಯತೆಯಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ದರವನ್ನು ಶೇ. 0 ಅಥವಾ ಶೇ. 5ಕ್ಕೆ ಇಳಿಸಿರುವುದು ಸ್ವಾಗತಾರ್ಹ. ಇದು ಸಾಮಾನ್ಯ ಜನರಿಗೆ ಸಹಾಯವಾಗುವ ನಿರ್ಧಾರ. ಆದರೆ ಇನ್ನೂ ಅನೇಕ ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ದರ ಹೆಚ್ಚು ಉಳಿದಿದೆ. ಜನಸಾಮಾನ್ಯರ ಜೀವನಕ್ಕೆ ನೇರವಾಗಿ ಸಂಬಂಧಿಸಿದ ವಸ್ತುಗಳ ಮೇಲೆ ತೆರಿಗೆ ಕಡಿಮೆ ಇರಬೇಕು, ಎಂದು ಅಭಿಪ್ರಾಯಪಟ್ಟರು. ಅವರು ಮುಂದುವರಿದು, “ಜಿಎಸ್ಟಿ ಸರಳೀಕರಣಕ್ಕೆ ಕಾಂಗ್ರೆಸ್ ಪಕ್ಷ ಯಾವಾಗಲೂ ಒತ್ತಾಯ ಮಾಡುತ್ತಿತ್ತು. ಹಲವು ವರ್ಷಗಳಿಂದ ನಾವು ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುತ್ತಿತ್ತು.
ಇದೀಗ ಕೇಂದ್ರ ಜಿಎಸ್ಟಿ ಕಡಿತ ಮಾಡಿ ಸರಳೀಕರಣಕ್ಕೆ ಹೆಜ್ಜೆ ಇಟ್ಟಿರುವುದು ಒಳ್ಳೆಯ ಬೆಳವಣಿಗೆ. ಆದರೆ ತೆರಿಗೆ ಕಡಿತವಾದಾಗ ಸರ್ಕಾರಕ್ಕೆ ಆದಾಯ ನಷ್ಟವಾಗುವುದು ಸಹಜ. ಕೇಂದ್ರದಂತೆ ರಾಜ್ಯಕ್ಕೂ ದೊಡ್ಡ ಮಟ್ಟದ ನಷ್ಟ ಉಂಟಾಗಬಹುದು. ಅಂದಾಜು ಪ್ರಕಾರ ರಾಜ್ಯಕ್ಕೆ ಸುಮಾರು 70 ಸಾವಿರ ಕೋಟಿ ರೂ. ನಷ್ಟವಾಗುವ ಸಾಧ್ಯತೆ ಇದೆ,” ಎಂದರು. ರಾಜ್ಯಗಳಿಗೆ ಆಗುವ ನಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರವೇ ಮುಂದಾಗಬೇಕು ಎಂದು ಪರಮೇಶ್ವರ್ ಮನವಿ ಮಾಡಿದರು. ಅನುದಾನ ಹಂಚಿಕೆ, ಅನಗತ್ಯ ವೆಚ್ಚಗಳ ನಿಯಂತ್ರಣ ಮತ್ತು ಪರ್ಯಾಯ ಸಂಪನ್ಮೂಲಗಳ ವ್ಯವಸ್ಥೆ ಮಾಡುವ ಜವಾಬ್ದಾರಿ ಕೇಂದ್ರದ ಮೇಲಿದೆ,” ಎಂದು ಅವರು ಹೇಳಿದರು.