ಮೈಸೂರು (ಸೆ.11): ಒಳ ಮೀಸಲಾತಿ ಹಂಚಿಕೆಯಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹೋರಾಟವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಅಲೆಮಾರಿ ಸಮುದಾಯಗಳನ್ನು ಒಗ್ಗೂಡಿಸಿ ಈ ಹೋರಾಟವನ್ನು ಮುಂದುವರೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಬಿ.ಆರ್. ಭಾಸ್ಕರ್ ಪ್ರಸಾದ್ ಎಚ್ಚರಿಕೆ ನೀಡಿದರು. ನಗರದ ಜೆ.ಎಲ್.ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಸಾಮಾಜಿಕ ನ್ಯಾಯಪರ ವೇದಿಕೆ ಆಯೋಜಿಸಿದ್ದ ಒಳ ಮೀಸಲಾತಿಯ ಒಳಸುಳಿಗಳ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ರಾಜಕೀಯ ಅಧಿಕಾರಕ್ಕಾಗಿ ಕುತ್ತಿಗೆ ಹಿಸುಕುವ ಕೆಲಸ ನಡೆಯುತ್ತಿದೆ. ಒಳ ಮೀಸಲಾತಿ ಹಂಚಿಕೆಯ ಕುರಿತು ಸಂಪೂರ್ಣ ಚರ್ಚೆ ನಡೆಸಲಾಗುವುದು. ಆದರೆ, ದಾಳಿ ಮಾಡುವುದು, ಚಪ್ಪಲಿ ಹಾರ ಹಾಕುವುದು ಎಂದರೆ ನಾವು ಸುಮ್ಮನಿರುವುದಿಲ್ಲ. ಮಾದಿಗರ ಇತಿಹಾಸ ತಿಳಿಯದೆ ಮಾತನಾಡುವುದು ಸರಿಯಲ್ಲ. ಬಡ್ತಿ, ಬ್ಯಾಕ್ಲಾಗ್ ಹುದ್ದೆಗಳು ಮತ್ತು ರಾಜಕೀಯದಲ್ಲಿ ಒಳ ಮೀಸಲಾತಿ ಇಲ್ಲ ಎನ್ನುವುದು ಒಪ್ಪಿಗೆಯಿಲ್ಲ.
ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಒಳ ಮೀಸಲಾತಿ ಜಾರಿಗೊಳಿಸುವುದು ಅಗತ್ಯ ಎಂದು ಅವರು ಹೇಳಿದರು.ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯಲ್ಲಿ ಆದಿ ಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರ (ಎಕೆಎಡಿಎ) ಕುರಿತ ಗೊಂದಲವನ್ನು ಬಗೆಹರಿಸಿ, ಬಡ್ತಿ ಮತ್ತು ಬ್ಯಾಕ್ಲಾಗ್ ಹುದ್ದೆಗಳಲ್ಲಿ ಒಳ ಮೀಸಲಾತಿ ಕಲ್ಪಿಸದಿದ್ದರೆ, ಸೆಪ್ಟೆಂಬರ್ 14ರಿಂದ ರಾಜ್ಯವ್ಯಾಪಿ ಎರಡನೇ ಹಂತದ ಹೋರಾಟ ಆರಂಭಿಸಲಾಗುವುದು ಎಂದು ಅವರು ಎಚ್ಚರಿಸಿದರು.
ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಈ ಹೋರಾಟ ಯಾರ ವಿರುದ್ಧವೂ ಅಲ್ಲ, ನಮ್ಮ ಹಕ್ಕುಗಳಿಗಾಗಿ ನಡೆಯುತ್ತಿದೆ. ಆದಿ ಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರ ಕುರಿತಂತೆ ಒಳ ಮೀಸಲಾತಿಯಲ್ಲಿ ಪರಿಶೀಲನೆ ಅಗತ್ಯ ಎಂದು ಒತ್ತಾಯಿಸಿದರು.ಚಿತ್ರದುರ್ಗ ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠದ ಶ್ರೀ ಷಡಕ್ಷರಿ ಮುನಿ ಸ್ವಾಮೀಜಿ, ಮುಖಂಡರಾದ ಕೋಡಿಹಳ್ಳಿ ಸಂತೋಷ್, ಕುಮಾರ್, ಪ್ರಕಾಶ್, ಮಂಜುನಾಥ್ ಗೋಪಾಲಪುರ, ಮರಡೀಪುರ ರವಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.