ಧರ್ಮಸ್ಥಳಕ್ಕೆ ಬೆಂಬಲ ಸೂಚಿಸಿ ಮೈಸೂರಿನ ವಕೀಲರ ತಂಡವೊಂದು ಇಂದು ಯಾತ್ರೆ ಕೈಗೊಂಡಿದೆ. ಸೆಪ್ಟೆಂಬರ್ 13ರಂದು ಸುಮಾರು 150 ವಕೀಲರು ಕಾರು ಹಾಗೂ ಎರಡು ಬಸ್ಗಳಲ್ಲಿ ನಗರದ ನ್ಯಾಯಾಲಯ ಆವರಣದಿಂದ ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದರು. ಈ ಯಾತ್ರೆಯ ಪ್ರಮುಖ ಉದ್ದೇಶ ಮಂಜುನಾಥ ಸ್ವಾಮಿಯ ದರ್ಶನ ಪಡೆಯುವುದು ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸುವುದು.
ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಸಂಚುಗಳನ್ನು ವಿರೋಧಿಸಿ ಈ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ. ಯಾತ್ರೆ ಆರಂಭಿಸುವ ಮುನ್ನ, ವಕೀಲರೆಲ್ಲರೂ ಕೇಸರಿ ಶಾಲುಗಳನ್ನು ಧರಿಸಿ, ಕೇಸರಿ ಧ್ವಜಗಳನ್ನು ಹಿಡಿದು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು. ಮಧ್ಯಾಹ್ನದ ವೇಳೆಗೆ ಈ ತಂಡ ಧರ್ಮಸ್ಥಳ ತಲುಪುವ ನಿರೀಕ್ಷೆಯಿದೆ.
ಇದೇ ರೀತಿ, ಇತ್ತೀಚೆಗೆ ಕಾಂಗ್ರೆಸ್ ಶಾಸಕ ಹರೀಶ್ ಗೌಡರ ನೇತೃತ್ವದಲ್ಲಿ ಮೈಸೂರಿನಿಂದ ಧರ್ಮಸ್ಥಳಕ್ಕೆ ಯಾತ್ರೆ ನಡೆದಿತ್ತು. ಅಲ್ಲದೆ, ಹಲವಾರು ಬಿಜೆಪಿ ನಾಯಕರು ಸಹ ಧರ್ಮಸ್ಥಳಕ್ಕೆ ಭೇಟಿ ನೀಡಿ, ಡಾ. ಹೆಗ್ಗಡೆ ಅವರಿಗೆ ನೈತಿಕ ಬೆಂಬಲವನ್ನು ಸೂಚಿಸಿದ್ದರು.