ಮಂಗಳೂರಿನ ಧರ್ಮಸ್ಥಳ ಗ್ರಾಮದಲ್ಲಿ ಅಕ್ರಮವಾಗಿ ಶವಗಳನ್ನು ಹೂತುಹಾಕಲಾಗಿದೆ ಎಂಬ ಆರೋಪದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ಇದುವರೆಗೆ 30ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದೆ. ಈ ದೂರುಗಳ ಪೈಕಿ ಅರ್ಹ ದೂರುಗಳ ಕುರಿತು ಸಮಗ್ರ ತನಿಖೆ ನಡೆಸಲು ಎಸ್ಐಟಿ ಮುಂದಾಗಿದೆ.
ಪೊಲೀಸರು ಮತ್ತು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ನಾಪತ್ತೆ ಪ್ರಕರಣಗಳು, ಅಸಹಜ ಸಾವುಗಳು, ಶಂಕಿತ ಕೊಲೆಗಳು ಹಾಗೂ ಅಕ್ರಮ ಶವ ವಿಲೇವಾರಿ ಕುರಿತು ಈ ದೂರುಗಳು ಸಲ್ಲಿಕೆಯಾಗಿವೆ. ಧರ್ಮಸ್ಥಳದ ಘನತೆಗೆ ಕುಂದು ತರಲು ವಿದೇಶದಿಂದ ಹಣಕಾಸಿನ ನೆರವು ಪಡೆದು ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಿ ಕೆಲವರು ದೂರು ನೀಡಿದ್ದಾರೆ.
ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಭಾನುವಾರ ಬೆಳ್ತಂಗಡಿಯ ಕಚೇರಿಯಲ್ಲಿ ತಂಡದ ಎಸ್ಪಿಗಳಾದ ಜಿತೇಂದ್ರ ಕುಮಾರ್ ದಯಾಮ, ಸಿ.ಎ. ಸೈಮನ್ ಹಾಗೂ ಇತರ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ತನಿಖೆಯ ಪ್ರಗತಿ ಹಾಗೂ ಸ್ವೀಕರಿಸಿದ ದೂರುಗಳ ವಿಲೇವಾರಿ ಕುರಿತು ಅವರು ಚರ್ಚಿಸಿದರು.
ಈಗಾಗಲೇ, ಕೆಲವು ದೂರುಗಳ ಬಗ್ಗೆ ತನಿಖಾಧಿಕಾರಿಗಳು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದಾರೆ. ಯಾವ ದೂರುಗಳು ತನಿಖೆಗೆ ಅರ್ಹವಾಗಿವೆ ಮತ್ತು ಯಾವ ದೂರುಗಳನ್ನು ಹಿಂಬರಹ ನೀಡಿ ಮುಕ್ತಾಯಗೊಳಿಸಬಹುದು ಎಂಬುದರ ಬಗ್ಗೆ ಮೊಹಾಂತಿ ಅಧಿಕಾರಿಗಳೊಂದಿಗೆ ಚರ್ಚಿಸಿದರು ಎಂದು ತಿಳಿದುಬಂದಿದೆ.ಇದನ್ನೂ ಓದಿ: ಕ್ರಿಸ್ಟಿಯಾನೊ ರೊನಾಲ್ಡೊರ ಫಿಟ್ನೆಸ್ ರಹಸ್ಯ: 40 ನೇ ವಯಸ್ಸಿನಲ್ಲಿ 28.9 ರ ರೀತಿಯ ವಯಸ್ಸು, 2025 ರ ಕಠಿಣ ದಿನಚರಿ ಹೀಗಿದೆ!
ನಾವು 30ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆಯ ಅಗತ್ಯವಿಲ್ಲದ ದೂರುಗಳನ್ನು ಹಿಂಬರಹ ನೀಡಿ ಇತ್ಯರ್ಥಪಡಿಸಬೇಕಾಗಿದೆ. ಕೆಲವು ದೂರುಗಳಲ್ಲಿ ಸಮಗ್ರ ತನಿಖೆಯ ಅಗತ್ಯ ಕಂಡುಬಂದಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.