ಡಿಸಿಎಂ ಡಿ.ಕೆ. ಶಿವಕುಮಾರ್ ಮಂಗಳವಾರ ರಾತ್ರಿ ಹಾಸನದ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನ ಪಡೆದರು. ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ದುರ್ಗಾ ಸ್ವರೂಪಿಯಾದ ಹಾಸನಾಂಬೆ ದೇವಿಯ ಸನ್ನಿಧಿಯಲ್ಲಿ ಡಿಕೆಶಿ ಅವರು ವಿಶೇಷ ಪೂಜೆಯನ್ನು ನೆರವೇರಿಸಿದರು.
ಸಾಮಾನ್ಯ ಪೂಜೆ ಅಥವಾ ದರ್ಶನವಾಗಿದ್ದರೆ ಇದು ಸುದ್ದಿಯಾಗದಿರಬಹುದಿತ್ತು. ಆದರೆ ಇತ್ತೀಚೆಗೆ ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆ ಚರ್ಚೆ ಬಿರುಸುಪಡೆದುಕೊಂಡಿರುವ ಸಮಯದಲ್ಲಿ, ಡಿಕೆಶಿ ಅವರ ಈ ಪೂಜೆ ರಾಜಕೀಯ ಅರ್ಥ ಪಡೆದಿದೆ. ಸಿಎಂ ರೇಸ್ನಲ್ಲಿ ಇದ್ದುಕೊಂಡಿರುವ ಡಿಕೆ ಶಿವಕುಮಾರ್ ಅವರು ಪತ್ನಿ ಉಷಾ ಶಿವಕುಮಾರ್ ಅವರೊಂದಿಗೆ ದೇವಿಯ ಗರ್ಭಗುಡಿಯಲ್ಲಿ ಸುಮಾರು 15 ನಿಮಿಷ ಆಸೀನರಾಗಿ ಶಕ್ತಿಪೂರ್ವಕವಾದ ಮಂತ್ರಪಠಣ ಮತ್ತು ಪೂಜೆಯನ್ನು ನೆರವೇರಿಸಿದರು. ಜೈಸಲ್ಮೇರ್ ಬಸ್ ದುರಂತ: ಮೂವರು ಮಕ್ಕಳ ಸೇರಿ 20 ಮಂದಿ ಭಸ್ಮ, 15 ಮಂದಿಗೆ ಗಂಭೀರ ಗಾಯ!
ಮೂಲಗಳ ಪ್ರಕಾರ, ಡಿಕೆಶಿ ಅವರು ನಾರಾಯಣಿ ನಮಸ್ಕಾರ ಮಂತ್ರ ಹಾಗೂ ಖಡ್ಗಮಾಲಾ ಸ್ತೋತ್ರ ಪಠಿಸಿದರು. ನಾರಾಯಣಿ ನಮಸ್ಕಾರ ಮಂತ್ರವು ದುರ್ಗಾ ಸಪ್ತಸತಿಯ 11ನೇ ಅಧ್ಯಾಯದಲ್ಲಿದ್ದು, ಅತ್ಯಂತ ಪ್ರಭಾವಶಾಲಿ ಮಂತ್ರವೆಂದು ಪರಿಗಣಿಸಲಾಗಿದೆ. ಈ ಮಂತ್ರವನ್ನು ಸಾಮಾನ್ಯವಾಗಿ ಚಂಡಿಕಾ ಹೋಮ ವೇಳೆ ಇಷ್ಟಾರ್ಥ ಸಿದ್ಧಿಗಾಗಿ ಪಠಿಸಲಾಗುತ್ತದೆ. ಖಡ್ಗಮಾಲಾ ಸ್ತೋತ್ರ ಪಠಣವೂ ಸುಮಾರು 5 ನಿಮಿಷಗಳ ಕಾಲ ನಡೆದಿದ್ದು, ಇದು ಶತ್ರುಗಳ ಮೇಲೆ ವಿಜಯ ಸಾಧನೆಗೆ ಸಂಕೇತವಾದ ಪೂಜೆಯಾಗಿ ಪರಿಗಣಿತವಾಗಿದೆ.
ದೇವಿಯ ಶಕ್ತಿಯ ಪ್ರಾಪ್ತಿಗಾಗಿ ಹಾಗೂ ವಿರೋಧಿಗಳ ಮೇಲೆ ಜಯ ಸಾಧನೆಗಾಗಿ ಈ ಸ್ತೋತ್ರವನ್ನು ಪಠಿಸುವ ಪದ್ಧತಿಯಿದೆ.
ಪೂಜೆಯ ವೇಳೆ ಡಿಕೆಶಿ ಅವರ ಸೂಚನೆಯಂತೆ ಅರ್ಚಕರು ವಿಶೇಷ ಸಂಕಲ್ಪ ಮಾಡಿ ದೇವಿಯ ಆಶೀರ್ವಾದ ಕೋರಿ ಈ ಸ್ತೋತ್ರದ ಮೂಲಕ ಪೂಜೆಯನ್ನು ನೆರವೇರಿಸಿರುವುದಾಗಿ ದೇವಸ್ಥಾನ ಮೂಲಗಳು ತಿಳಿಸಿವೆ. ಈ ಘಟನೆಯಿಂದ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಪ್ರಾರಂಭವಾಗಿದ್ದು, ಡಿಕೆಶಿ ಅವರ ಪೂಜೆ ಸಿಎಂ ಸ್ಥಾನಕಾಂಕ್ಷೆಗೆ ನಂಬಿಕೆಯ ಸಂಕೇತವೇ” ಎಂಬ ಪ್ರಶ್ನೆ ಪ್ರಬಲವಾಗಿದೆ.