ನವದೆಹಲಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಕಳಪೆ ಗುಣಮಟ್ಟದ, ಹುಳು ಇರುವ ಆಹಾರ ಪೂರೈಸಿದ್ದಕ್ಕಾಗಿ ಭಾರತೀಯ ರೈಲ್ವೆ ಊಟೋಪಚಾರ ಮತ್ತು ಪ್ರವಾಸೋದ್ಯಮ ನಿಗಮಕ್ಕೆ (**IRCTC**) ದೆಹಲಿಯ ಗ್ರಾಹಕ ನ್ಯಾಯಾಲಯವು ಬಿಸಿ ಮುಟ್ಟಿಸಿದೆ. ಸಂತ್ರಸ್ತ ಪ್ರಯಾಣಿಕರಿಗೆ ₹25,000 ಪರಿಹಾರ ನೀಡುವಂತೆ ನ್ಯಾಯಾಲಯವು ಐಆರ್ಸಿಟಿಸಿಗೆ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ
ರೈಲು ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರು IRCTCಯಿಂದ ಊಟವನ್ನು ಖರೀದಿಸಿದ್ದರು. ಆದರೆ, ಆ ಊಟದಲ್ಲಿ ಹುಳುಗಳಿದ್ದುದನ್ನು ಗಮನಿಸಿ ಅದನ್ನು ಸೇವಿಸಿದ ನಂತರ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಈ ಕಳಪೆ ಸೇವೆಯಿಂದಾಗಿ ಪ್ರಯಾಣಿಕರು ತಮಗಾದ ಅನನುಕೂಲತೆ ಮತ್ತು ಆರೋಗ್ಯದ ಸಮಸ್ಯೆಗಳಿಗಾಗಿ ನ್ಯಾಯ ಕೋರಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.
ಗ್ರಾಹಕ ಹಕ್ಕುಗಳ ರಕ್ಷಣೆ
ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಾಲಯ, IRCTCಯ ಸೇವೆಯಲ್ಲಿನ ಲೋಪವನ್ನು ಎತ್ತಿಹಿಡಿದು, ಇದು ಗ್ರಾಹಕರ ಹಕ್ಕುಗಳ ಉಲ್ಲಂಘನೆ ಎಂದು ತೀರ್ಮಾನಿಸಿತು. ಅನಂತರ 25,000 ರೂಪಾಯಿ ಪರಿಹಾರದ ಮೊತ್ತವನ್ನ ಘೋಷಿಸಿದೆ. ಹಾಗೆ ಗುಣಮಟ್ಟದ ಆಹಾರವನ್ನು ಒದಗಿಸುವುದು ಸೇವಾ ಪೂರೈಕೆದಾರರ ಮೂಲಭೂತ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ಒತ್ತಿಹೇಳಿದೆ.