ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸುರಂಗ ರಸ್ತೆ ಯೋಜನೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಇದೀಗ ರಾಜ್ಯ ಸರ್ಕಾರ ನಮ್ಮ ಮೆಟ್ರೋವನ್ನು ತುಮಕೂರಿನವರೆಗೆ ವಿಸ್ತರಿಸುವ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ರಿಯಲ್ ಎಸ್ಟೇಟ್ಗೆ ಅನುಕೂಲ ಕಲ್ಪಿಸಲು ಮಾತ್ರ ಇಂತಹ ಯೋಚನೆಗಳು ಸರ್ಕಾರಕ್ಕೆ ಬರುತ್ತವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಟ್ರೋ ವ್ಯವಸ್ಥೆ ನಗರ ಪ್ರದೇಶದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮೀಸಲಾಗಿದ್ದು, ಜಿಲ್ಲೆ-ಜಿಲ್ಲೆಗಳ ನಡುವಿನ ಸಂಚಾರಕ್ಕೆ ಇದು ಸೂಕ್ತವಲ್ಲ ಎಂದು ಸೂರ್ಯ ಪ್ರತಿಪಾದಿಸಿದ್ದಾರೆ.
ಬಸವನಗುಡಿ ಕಡಲೆಕಾಯಿ ಪರಿಷೆಯ ಉದ್ಘಾಟನೆಯ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಂಸದರು, "ಯಾವುದೇ ಕಾರಣಕ್ಕೂ ತುಮಕೂರಿಗೆ ಮೆಟ್ರೋ ವಿಸ್ತರಣೆ ಮಾಡಬಾರದು. ಯಾವ ಯೋಜನೆಗಳನ್ನು ಎಲ್ಲಿ ಮತ್ತು ಹೇಗೆ ಮಾಡಬೇಕು ಎಂಬ ಕನಿಷ್ಠ ಅರಿವು ಸರ್ಕಾರಕ್ಕೆ ಇಲ್ಲ. ಮೆಟ್ರೋ ನಗರದ ಟ್ರಾಫಿಕ್ ಕಡಿಮೆ ಮಾಡಲು ಇರುವುದು. ತುಮಕೂರಿಗೆ ಅಭಿವೃದ್ಧಿ ಬೇಕು, ಆದರೆ ಅದಕ್ಕಾಗಿ ಬೇರೆ ರಾಜ್ಯಗಳಲ್ಲಿರುವಂತೆ RRTS (ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ) ಬಳಸಬಹುದು" ಎಂದು ಸಲಹೆ ನೀಡಿದ್ದಾರೆ.