ನವದೆಹಲಿ: ಭಾರತದೊಂದಿಗೆ ಉತ್ತಮ ವ್ಯಾಪಾರ ಹಾಗೂ ರಾಜಕೀಯ ಸಂಬಂಧವನ್ನ ಹೊಂದುವುದು ಅಫ್ಘಾನಿಸ್ತಾನದ ಸ್ವಾತಂತ್ರ್ಯ ಹಕ್ಕು ಎಂದು ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಖಡಕ್ ಉತ್ತರವನ್ನ ನೀಡಿದೆ. "ಇದು ನಮ್ಮ ಹಕ್ಕು" ಎಂದು ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಕಿ ಹೇಳಿಕೆಯನ್ನ ನೀಡಿದ್ದಾರೆ.
ಅಫ್ಘಾನ್ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನ ವಿರೋಧಿ ಸಶಸ್ತ್ರ ಗುಂಪುಗಳಿಗೆ ಭಾರತ ಬೆಂಬಲ ನೀಡುತ್ತಿದೆ ಎಂಬ ಪಾಕಿಸ್ತಾನದ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ. ಅಷ್ಟೇ ಅಲ್ಲದೆ, ಉತ್ತರ ಪ್ರದೇಶದ ಇಸ್ಲಾಮಿಕ್ ಸೆಮಿನರಿ ದಾರುಲ್ ಉಲೂಮ್ ದೇವಬಂದ್ಗೆ ತಾವು ಭೇಟಿ ನೀಡಿದ್ದನ್ನು ಟೀಕಿಸಿದ್ದಕ್ಕಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಮೇಲೂ ಅವರು ವಾಗ್ದಾಳಿ ನಡೆಸಿದ್ದಾರೆ.
ಕಾಬೂಲ್ನಲ್ಲಿ ರಾಜಕಾರಣಿಗಳು ಮತ್ತು ವಿಶ್ಲೇಷಕರೊಂದಿಗೆ ಮಾತನಾಡಿದ ಮುತ್ತಕಿ, ಪಾಕಿಸ್ತಾನದ ಆರೋಪಗಳು ಅಸಂಗತ ಮತ್ತು ರಾಜಕೀಯ ಪ್ರೇರಿತ ಎಂದು ಬಣ್ಣಿಸಿದ್ದಾರೆ.
'ಭಾರತದ ಜೊತೆಗಿನ ಸಂಬಂಧ ನಮ್ಮ ಹಕ್ಕು'
ಕಾಬೂಲ್ ಮೂಲದ ಮಾಧ್ಯಮಗಳೊಂದಿಗೆ ಮಾತನಾಡಿದ ಮುತ್ತಕಿ, ಪಾಕಿಸ್ತಾನವು ತನ್ನ ದೂರುಗಳನ್ನು ಪದೇ ಪದೇ ಬದಲಾಯಿಸುತ್ತಿದೆ ಎಂದು ಹೇಳಿದ್ದಾರೆ:
"ನಾವು ಸ್ಥಿರವಾಗಿ ಉಳಿದಿದ್ದೇವೆ. ಆದರೆ ಪಾಕಿಸ್ತಾನ ಮೊದಲು ಟಿಟಿಪಿ (Tehrik-i-Taliban Pakistan) ಬಗ್ಗೆ ನಮ್ಮನ್ನು ದೂಷಿಸುತ್ತದೆ. ಅದರ ಕುರಿತು ನಾವು ಮಾತುಕತೆಯಲ್ಲಿ ಪ್ರಗತಿ ಸಾಧಿಸಿದೆವು. ನಂತರ ಅವರು ಬಿಎಲ್ಎ (BLA - Baloch Liberation Army), ಬಲೂಚ್ ಚಳುವಳಿ ಎಂದು ಹೇಳುತ್ತಾರೆ. ಅದನ್ನೂ ನಾವು ಬಗೆಹರಿಸುತ್ತಿದ್ದೇವೆ. ಕೊನೆಗೆ ಅವರು ಭಾರತದ ಕೈವಾಡವಿದೆ ಎಂದು ಹೇಳುತ್ತಾರೆ."
ಅಫ್ಘಾನ್ ಸಚಿವರು ತಮ್ಮ ದೇಶವು ಸ್ವತಂತ್ರ ವಿದೇಶಾಂಗ ನೀತಿಯನ್ನು ನಿರ್ವಹಿಸುತ್ತದೆ ಎಂದು ಒತ್ತಿ ಹೇಳಿದರು. "ಭಾರತದೊಂದಿಗಿನ ನಮ್ಮ ಸಂಬಂಧ ರಾಜಕೀಯ ಮತ್ತು ಆರ್ಥಿಕ ಸ್ವರೂಪದ್ದಾಗಿದೆ. ನಮ್ಮ ನೀತಿ ಸ್ವತಂತ್ರವಾಗಿದೆ; ಯಾರೊಂದಿಗಾದರೂ ತೊಡಗಿಸಿಕೊಳ್ಳುವ ಹಕ್ಕು ನಮಗಿದೆ," ಎಂದು ಅವರು ಸ್ಪಷ್ಟಪಡಿಸಿದರು.
ಪಾಕಿಸ್ತಾನವೇ ಭಾರತದಲ್ಲಿ ದೂತಾವಾಸ ಹೊಂದಿದೆ!
ಪಾಕಿಸ್ತಾನವು ದಶಕಗಳ ಕಾಲದ ಉದ್ವಿಗ್ನತೆಯ ನಡುವೆಯೂ ಭಾರತದೊಂದಿಗೆ ಸಂಪೂರ್ಣ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಹೊಂದಿದೆ ಎಂದು ಮುತ್ತಕಿ ಬೊಟ್ಟು ಮಾಡಿದರು."ಪಾಕಿಸ್ತಾನವೇ ದೆಹಲಿಯಲ್ಲಿ ರಾಯಭಾರ ಕಚೇರಿಯನ್ನು ಹೊಂದಿದೆ. ಅಲ್ಲಿ ವ್ಯಾಪಾರ ಮತ್ತು ಸಂಬಂಧಗಳನ್ನು ಹೊಂದಿದೆ. ಅವರಿಗೆ ಸಂಬಂಧವಿದ್ದರೆ, ನಮಗೆ ಏಕೆ ಇರಬಾರದು? ಇದು ನಮ್ಮ ಹಕ್ಕು."
ಅಫ್ಘಾನಿಸ್ತಾನದ ಸಂಬಂಧಗಳು ಯಾವುದೇ ಮೂರನೇ ದೇಶದ ವಿರುದ್ಧ ನಿರ್ದೇಶಿತವಾಗಿಲ್ಲ ಎಂದು ಮುತ್ತಕಿ ಒತ್ತಿ ಹೇಳಿದರು. "ನಮ್ಮ ರಾಜಕೀಯ ಸಂಬಂಧಗಳು ಭಾರತದೊಂದಿಗೆ ಇರಲಿ ಅಥವಾ ಬೇರೆ ಯಾವುದೇ ದೇಶದೊಂದಿಗಿರಲಿ, ಅದು ಯಾರ ವಿರುದ್ಧವೂ ಇಲ್ಲ ಮತ್ತು ಯಾರಿಗೂ ಹಾನಿಕಾರಕವೂ ಅಲ್ಲ. ಇದು ನಮ್ಮ ಸಮತೋಲಿತ ನೀತಿಯ ಅರ್ಥ. ಅಫ್ಘಾನಿಸ್ತಾನವು ಇನ್ನು ಮುಂದೆ ಋಣಾತ್ಮಕ ರಾಜಕೀಯಕ್ಕೆ ಅಥವಾ ಮಹಾಶಕ್ತಿಗಳ ಪೈಪೋಟಿಗೆ ಯುದ್ಧಭೂಮಿಯಾಗುವುದಿಲ್ಲ," ಎಂದು ಅವರು ಹೇಳಿದರು.
ಶೆಹಬಾಜ್ ಷರೀಫ್ ಟೀಕೆಗೆ ತಿರುಗೇಟು
ನವೆಂಬರ್ 2024 ರಲ್ಲಿ ಭಾರತದ ಆಹ್ವಾನದ ಮೇರೆಗೆ ಮುತ್ತಕಿ ಅವರು ದೆಹಲಿಗೆ ಭೇಟಿ ನೀಡಿದ್ದರು ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ಭೇಟಿಯ ವೇಳೆ ಅವರು ದಾರುಲ್ ಉಲೂಮ್ ದೇವಬಂದ್ ಸೆಮಿನರಿಗೂ ಭೇಟಿ ನೀಡಿದ್ದರು. ಈ ಭೇಟಿಯನ್ನು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಟೀಕಿಸಿದ್ದರು.
ಷರೀಫ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಮುತ್ತಕಿ, ಅಂತಹ ಭೇಟಿಗಳು ಯಾವುದೇ ನಿಯಮಗಳನ್ನು ಉಲ್ಲಂಘಿಸುತ್ತವೆಯೇ ಎಂದು ಪ್ರಶ್ನಿಸಿದರು:
"ನೀವು ಕೇಳಿರಬಹುದು, ಪಾಕಿಸ್ತಾನದ ಪ್ರಧಾನಿ ಇತ್ತೀಚೆಗೆ ದುಃಖ ವ್ಯಕ್ತಪಡಿಸಿ, ಅಫ್ಘಾನ್ ವಿದೇಶಾಂಗ ಸಚಿವರು ಭಾರತಕ್ಕೆ ಪ್ರಯಾಣಿಸಿ ದೇವಬಂದ್ಗೂ ಭೇಟಿ ನೀಡಿದ್ದಾರೆ ಎಂದು ಹೇಳಿದರು. ಭಾರತ ಅಥವಾ ದೇವಬಂದ್ಗೆ ಭೇಟಿ ನೀಡುವುದು ಅಂತಾರಾಷ್ಟ್ರೀಯ ನಿಯಮಗಳ ವಿರುದ್ಧವೇ? ವ್ಯಾಪಾರ, ಆರ್ಥಿಕತೆ, ರಾಜಕೀಯ ಮತ್ತು ನೆರೆಹೊರೆಯ ಸಂಬಂಧಗಳನ್ನು ನಿಷೇಧಿಸಲಾಗಿದೆಯೇ?" ಎಂದು ಮುತ್ತಕಿ ಪ್ರಶ್ನಿಸಿದ್ದಾರೆ.
ತಾವು ಎಂದಿಗೂ ಇಸ್ಲಾಮಾಬಾದ್ಗೆ ಅವಮಾನ ಮಾಡಿಲ್ಲ, ಅವರ ಜನಾಂಗೀಯ ಗುಂಪುಗಳು ಮತ್ತು ನ್ಯಾಯಯುತ ಬೇಡಿಕೆಗಳನ್ನು ಗೌರವಿಸುತ್ತೇವೆ ಎಂದು ಅಫ್ಘಾನ್ ಸಚಿವರು ಹೇಳಿದರು. ಪಾಕಿಸ್ತಾನವು ಅಫ್ಘಾನಿಸ್ತಾನದೊಳಗೆ ವೈಮಾನಿಕ ದಾಳಿಗಳನ್ನು ನಡೆಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಕಳೆದ ಕೆಲವು ತಿಂಗಳುಗಳಿಂದ ಉದ್ವಿಗ್ನವಾಗಿವೆ. ತಾಲಿಬಾನ್ ಆಡಳಿತವು ತನ್ನ ನೆರೆಹೊರೆಯವರ ವಿರುದ್ಧ ಅಫ್ಘಾನ್ ನೆಲವನ್ನು ಬಳಸಲು ಯಾವುದೇ ಗುಂಪಿಗೆ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದೆ.