Skip to main content
ವಿಡಿಯೋ
crime

ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮೃತ್ಯುಕೂಪಕ್ಕೆ ತಳ್ಳಿದ ಪಾಪಿ ಮಗ: ಗಿರಿನಗರದಲ್ಲಿ ನಡೆದ ಘೋರ ಕೃತ್ಯ..!

By Bhavana Gowda
ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮೃತ್ಯುಕೂಪಕ್ಕೆ ತಳ್ಳಿದ ಪಾಪಿ ಮಗ: ಗಿರಿನಗರದಲ್ಲಿ ನಡೆದ ಘೋರ ಕೃತ್ಯ..!

ರಾಜಧಾನಿಯ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಸ್ತಿ ಹಪಾಹಪಿಗೆ ಮಗನೊಬ್ಬ ಹೆತ್ತ ತಾಯಿಯ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನುಷ ಘಟನೆ ವರದಿಯಾಗಿದೆ.

ಬೆಂಗಳೂರು: ರಾಜಧಾನಿಯ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಸ್ತಿ ಹಪಾಹಪಿಗೆ ಮಗನೊಬ್ಬ ಹೆತ್ತ ತಾಯಿಯ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನುಷ ಘಟನೆ ವರದಿಯಾಗಿದೆ. ಆಸ್ತಿಗಾಗಿ ನಡೆದ ಜಗಳದಲ್ಲಿ ವೃದ್ಧೆ ಲಕ್ಷ್ಮೀ ಎಂಬುವವರು ಈಗ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಘಟನೆಯ ಹಿನ್ನೆಲೆ:

ವೃದ್ಧೆ ಲಕ್ಷ್ಮೀ ಅವರಿಗೆ ಮೂವರು ಗಂಡು ಮಕ್ಕಳು. ಇವರ ಪತಿ ಮತ್ತು ಎರಡನೇ ಮಗ ಈಗಾಗಲೇ ಮೃತಪಟ್ಟಿದ್ದಾರೆ. ಮೊದಲನೇ ಮಗ ರಮೇಶ್ ಮತ್ತು ಮೂರನೇ ಮಗ ಪ್ರಕಾಶ್ ನಡುವೆ ಕಳೆದ ಹಲವು ವರ್ಷಗಳಿಂದ ಆಸ್ತಿ ಹಂಚಿಕೆ ವಿಚಾರವಾಗಿ ತೀವ್ರ ಕಲಹ ಏರ್ಪಟ್ಟಿತ್ತು.

ಕೋರ್ಟ್ ಮೆಟ್ಟಿಲೇರಿದ್ದ ವಿವಾದ: ಆಸ್ತಿ ಭಾಗವಾಗಬೇಕೆಂದು ಮೂರನೇ ಮಗ ಪ್ರಕಾಶ್ 2016ರಲ್ಲಿಯೇ ನ್ಯಾಯಾಲಯದ ಮೊರೆ ಹೋಗಿದ್ದನು. ಅಂದಿನಿಂದಲೂ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ.

ಏಕಾಏಕಿ ದಾಳಿ ನಡೆಸಿದ ಪ್ರಕಾಶ್:

ನಿನ್ನೆ ಪ್ರಕಾಶ್ ಏಕಾಏಕಿ ಮನೆಗೆ ನುಗ್ಗಿ ತನ್ನ ಅಣ್ಣ ರಮೇಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಅಷ್ಟಕ್ಕೇ ನಿಲ್ಲದ ಈತನ ಕ್ರೌರ್ಯ, ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಒಡೆದು ಹಾಕಿ ರಂಪಾಟ ಮಾಡಿದ್ದಾನೆ.

ತಾಯಿಯ ಮೇಲೆಯೇ ಹಲ್ಲೆ: ಅಣ್ಣ-ತಮ್ಮಂದಿರ ಜಗಳ ಬಿಡಿಸಲು ಬಂದ ವೃದ್ಧೆ ತಾಯಿ ಲಕ್ಷ್ಮೀ ಅವರನ್ನೂ ಈ ಪಾಪಿ ಬಿಟ್ಟಿಲ್ಲ. ತನ್ನ ಕೈಯಲ್ಲಿದ್ದ ವಾಕಿಂಗ್ ಸ್ಟಿಕ್‌ನಿಂದ ತಾಯಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಪೆಟ್ಟಿನ ತೀವ್ರತೆಗೆ ವೃದ್ಧೆಯ ತಲೆಗೆ ಗಂಭೀರ ಗಾಯವಾಗಿದ್ದು, ಅವರು ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ಆಸ್ಪತ್ರೆಗೆ ದಾಖಲು - FIR ದಾಖಲು:

ತಕ್ಷಣ ಹಿರಿಯ ಮಗ ರಮೇಶ್ ಅವರು 112 ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ತಾಯಿಯನ್ನು ಜಯನಗರದ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಹಿರಿಯ ಮಗ ರಮೇಶ್ ನೀಡಿದ ದೂರಿನ ಮೇರೆಗೆ ಗಿರಿನಗರ ಪೊಲೀಸ್ ಠಾಣೆಯ ಪೊಲೀಸರು ಪ್ರಕಾಶ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.