Skip to main content
ವಿಡಿಯೋ
politics

ಜೆಡಿಎಸ್‌ನಿಂದಲೇ ಸ್ಪರ್ಧೆ, ಟಿಕೆಟ್ ನೀಡದಿದ್ದರೆ ನಿಮ್ಮ ತೀರ್ಮಾನಕ್ಕೆ ಬದ್ಧ: ಮತದಾರರ ಮುಂದೆ ಜಿ.ಟಿ. ದೇವೇಗೌಡ ಹೊಸ ದಾಳ!

By Bhavana Gowda
ಜೆಡಿಎಸ್‌ನಿಂದಲೇ ಸ್ಪರ್ಧೆ, ಟಿಕೆಟ್ ನೀಡದಿದ್ದರೆ ನಿಮ್ಮ ತೀರ್ಮಾನಕ್ಕೆ ಬದ್ಧ: ಮತದಾರರ ಮುಂದೆ ಜಿ.ಟಿ. ದೇವೇಗೌಡ ಹೊಸ ದಾಳ!

ಚಾಮುಂಡೇಶ್ವರಿ ಕ್ಷೇತ್ರದ ಪ್ರಭಾವಿ ನಾಯಕ, ಶಾಸಕ ಜಿ.ಟಿ. ದೇವೇಗೌಡರು (GTD) ತಮ್ಮ ರಾಜಕೀಯ ಭವಿಷ್ಯದ ಕುರಿತು ಮತದಾರರ ಮುಂದೆ ಹೊಸ ದಾಳ ಉರುಳಿಸಿದ್ದಾರೆ.

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಪ್ರಭಾವಿ ನಾಯಕ, ಶಾಸಕ ಜಿ.ಟಿ. ದೇವೇಗೌಡರು (GTD) ತಮ್ಮ ರಾಜಕೀಯ ಭವಿಷ್ಯದ ಕುರಿತು ಮತದಾರರ ಮುಂದೆ ಹೊಸ ದಾಳ ಉರುಳಿಸಿದ್ದಾರೆ. ಕಳೆದ ಕೆಲವು ಸಮಯದಿಂದ ಜೆಡಿಎಸ್ ಚಟುವಟಿಕೆಗಳಿಂದ ದೂರವಿದ್ದ ಜಿಟಿಡಿ, ಇದೀಗ "ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ ಮತ್ತು ಮುಂದಿನ ಚುನಾವಣೆಯಲ್ಲಿ ಅದೇ ಪಕ್ಷದಿಂದ ಸ್ಪರ್ಧಿಸುತ್ತೇನೆ" ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ!

ಮೈಸೂರು ತಾಲೂಕಿನ ಜಯಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ನಾನು ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಪಕ್ಷದಿಂದ ನನಗೆ ಟಿಕೆಟ್ ನೀಡದಿದ್ದರೆ, ನನ್ನ ಮತದಾರರಾದ ನೀವು ಏನು ಹೇಳುತ್ತೀರೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ನೀವು ಅರ್ಜಿ ಹಾಕು ಎಂದರೆ ಖಂಡಿತಾ ಹಾಕುತ್ತೇನೆ" ಎಂದು ಭಾವನಾತ್ಮಕವಾಗಿ ನುಡಿದರು.

ಬೆಳೆಸಿದವರ ವಿರುದ್ಧವೇ ಅಸಮಾಧಾನ

ತಮ್ಮ ರಾಜಕೀಯ ಏರಿಳಿತಗಳ ಬಗ್ಗೆ ಮಾತನಾಡಿದ ಜಿಟಿಡಿ, "ಯಾವುದೇ ಆಸೆ-ಆಮಿಷವಿಲ್ಲದ ಸಾಮಾನ್ಯ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಆದರೆ ನಾನು ಬೆಳೆಸಿದವರು ಮತ್ತು ನನ್ನಿಂದಾಗಿ ಹಣ ಮಾಡಿದವರು ಇಂದು ನನ್ನ ವಿರುದ್ಧವೇ ನಿಂತಿದ್ದಾರೆ. ಇದು ಇವತ್ತಿನದ್ದಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದವೇ ನನಗೆ ದೈವ" ಎಂದು ವಿರೋಧಿಗಳ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

ಕುತೂಹಲ ಮೂಡಿಸಿದ ಜಿಟಿಡಿ ನಡೆ

ಜಿ.ಟಿ. ದೇವೇಗೌಡರ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ:

ಸಭೆಗಳಿಗೆ ಗೈರು: ಕಳೆದ ಹಲವು ತಿಂಗಳುಗಳಿಂದ ಜೆಡಿಎಸ್‌ನ ಯಾವುದೇ ಪ್ರಮುಖ ಸಭೆ ಅಥವಾ ಸಮಾರಂಭಗಳಲ್ಲಿ ಜಿಟಿಡಿ ಕಾಣಿಸಿಕೊಳ್ಳುತ್ತಿಲ್ಲ.

ವರಿಷ್ಠರ ನಿರ್ಲಕ್ಷ್ಯ: ಜೆಡಿಎಸ್ ವರಿಷ್ಠರು ಕೂಡ ಜಿಟಿಡಿ ಅವರನ್ನು ಹೊರಗಿಟ್ಟು ಸಂಘಟನೆ ಮಾಡುತ್ತಿರುವ ಮುನ್ಸೂಚನೆ ಸಿಕ್ಕಿದೆ. ಪಕ್ಷದ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳಲ್ಲಿ ಜಿಟಿಡಿ ಫೋಟೋ ಮಾಯವಾಗಿರುವುದು ಇದಕ್ಕೆ ಸಾಕ್ಷಿ.

ಬಂಡಾಯದ ಮುನ್ಸೂಚನೆಯೇ?: ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಸಂದೇಶವನ್ನು ರವಾನಿಸುತ್ತಲೇ, "ಟಿಕೆಟ್ ನೀಡದಿದ್ದರೆ ಮತದಾರರ ತೀರ್ಮಾನ" ಎನ್ನುವ ಮೂಲಕ ಸ್ವತಂತ್ರವಾಗಿ ಅಥವಾ ಬೇರೆ ದಾರಿ ಹುಡುಕುವ ಸೂಚನೆಯನ್ನು ಅವರು ನೀಡಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಸದ್ಯಕ್ಕೆ ಜೆಡಿಎಸ್ ಪಾಳಯದಲ್ಲಿ ಜಿಟಿಡಿ ಅವರನ್ನು ಉಳಿಸಿಕೊಳ್ಳುತ್ತಾರೋ ಅಥವಾ ಅವರು ಹೇಳಿದಂತೆ ಟಿಕೆಟ್ ನೀಡದೆ ಹೊಸ ಮುಖಕ್ಕೆ ಮಣೆ ಹಾಕುತ್ತಾರೋ ಎಂಬುದು ಕಾದು ನೋಡಬೇಕಿದೆ.