ಹಾಸನ: ಜಿಲ್ಲೆಯಲ್ಲಿ ಜೀತ ಪದ್ಧತಿಯ ಕರಾಳ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ. ಶುಂಠಿ ಹೊಲದಲ್ಲಿ ಕೆಲಸ ಕೊಡುವುದಾಗಿ ನಂಬಿಸಿ ತಂದು, ಬರೋಬ್ಬರಿ ಒಂದು ವರ್ಷದಿಂದ 12ಕ್ಕೂ ಅಧಿಕ ಕಾರ್ಮಿಕರನ್ನು ಅಕ್ರಮವಾಗಿ ಕೂಡಿಹಾಕಿ ಚಿತ್ರಹಿಂಸೆ ನೀಡಿರುವ ಅತ್ಯಂತ ಆಘಾತಕಾರಿ ಘಟನೆ ಅರಸೀಕೆರೆ ತಾಲೂಕಿನ ತಾವರೆಹಳ್ಳಿ ಬಳಿ ಬೆಳಕಿಗೆ ಬಂದಿದೆ.
ನಾನಾ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಕೆಲಸಕ್ಕಾಗಿ ನಂಬಿ ಬಂದ ಬಡ ಜನರನ್ನು ಇಲ್ಲಿ ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳಲಾಗಿದೆ. ಈ ಜೀತದಾಳುಗಳ ಪಟ್ಟಿಯಲ್ಲಿ ಒಬ್ಬ ಅಪ್ರಾಪ್ತ ಬಾಲಕಾರ್ಮಿಕ ಮತ್ತು ಓರ್ವ ವಿಕಲಚೇತನ ವ್ಯಕ್ತಿ ಕೂಡ ಸೇರಿದ್ದು, ಇವರೆಲ್ಲರಿಗೂ ಕಳೆದ ಒಂದು ವರ್ಷದಿಂದ ನರಕ ದರ್ಶನ ಮಾಡಿಸಲಾಗಿದೆ.
ತಿಂಗಳಿಗೊಮ್ಮೆ ಸ್ನಾನ, ಮೊಬೈಲ್ ಕಸಿದು ದೊಣ್ಣೆ ಪೆಟ್ಟು!
ರಕ್ಷಿಸಲ್ಪಟ್ಟ ಕಾರ್ಮಿಕರು ಅಲ್ಲಿ ತಾವು ಅನುಭವಿಸಿದ ಕ್ರೌರ್ಯವನ್ನು ಕಣ್ಣೀರು ಹಾಕುತ್ತಾ ವಿವರಿಸಿದ್ದಾರೆ:
* ದಿನಕ್ಕೆ 2 ಊಟ: ಇಡೀ ದಿನ ದುಡಿದರೂ ಹೊಟ್ಟೆತುಂಬಾ ಊಟ ಸಿಗುತ್ತಿರಲಿಲ್ಲ. ದಿನಕ್ಕೆ ಕೇವಲ ಎರಡು ಹೊತ್ತು ಮಾತ್ರ ಅಲ್ಪಸ್ವಲ್ಪ ಊಟ ನೀಡಲಾಗುತ್ತಿತ್ತು.
* ದೊಣ್ಣೆಯಲ್ಲಿ ಹಲ್ಲೆ: ಮಾಡಿದ ಕೆಲಸಕ್ಕೆ ಕೂಲಿ ಹಣ ಕೇಳಿದರೆ ಮಾಲೀಕರು ಮತ್ತು ಮೇಸ್ತ್ರಿಗಳು ದೊಣ್ಣೆಗಳಿಂದ ಮನಬಂದಂತೆ ಥಳಿಸುತ್ತಿದ್ದರು.
* ಸ್ನಾನಕ್ಕೂ ನಿರ್ಬಂಧ: ಈ ಕೀಚಕರು ಕಾರ್ಮಿಕರಿಗೆ ತಿಂಗಳಿಗೊಮ್ಮೆ ಮಾತ್ರ ಸ್ನಾನ ಮಾಡಲು ಬಿಡುತ್ತಿದ್ದರು! ಜೊತೆಗೆ ಯಾರೂ ತಪ್ಪಿಸಿಕೊಂಡು ಹೋಗಬಾರದೆಂದು ಎಲ್ಲರ ಚಪ್ಪಲಿಗಳನ್ನೂ ಕಸಿದುಕೊಂಡಿದ್ದರು.
* ಬೆದರಿಕೆ: ಎಲ್ಲರ ಮೊಬೈಲ್ ಫೋನ್ಗಳನ್ನು ಕಿತ್ತುಕೊಂಡು, ಪ್ರಾಣ ಬೆದರಿಕೆ ಹಾಕಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗುತ್ತಿತ್ತು.
ರಕ್ಷಣೆ ಮಾಡಿದ ಯುವಕರ ವಿರುದ್ಧವೇ ಕೇಸ್!
ತಮ್ಮನ್ನು ಹೇಗಾದರೂ ಮಾಡಿ ರಕ್ಷಿಸುವಂತೆ ಕಾರ್ಮಿಕರು ಅಳಲು ತೋಡಿಕೊಂಡಾಗ, ಪರಿಸ್ಥಿತಿಯ ಗಂಭೀರತೆ ಅರಿತ ತಾವರೆಹಳ್ಳಿ ಗ್ರಾಮದ ಸ್ಥಳೀಯ ಯುವಕರು ಧೈರ್ಯ ಮಾಡಿ ಮುಂದಾಗಿದ್ದಾರೆ. ಕಾರ್ಮಿಕರನ್ನು ಆ ನರಕದಿಂದ ಬಿಡಿಸಿ ಸುರಕ್ಷಿತವಾಗಿ ಜಾವಗಲ್ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ಪೊಲೀಸರ ನಡೆಗೆ ಆಕ್ರೋಶ:
ಠಾಣೆಗೆ ಬರುತ್ತಿದ್ದಂತೆ ಮೇಸ್ತ್ರಿಗಳಾದ ಆನಂದ್, ಯೋಗಿಶ್ ಹಾಗೂ ಶಶಿಕುಮಾರ್ ಮತ್ತು ಜೀತಕ್ಕಿದ್ದ ಕಾರ್ಮಿಕರ ನಡುವೆ ಜಾವಗಲ್ ಠಾಣೆಯ ಪಿಎಸ್ಐ ರಾಜಿ ಸಂಧಾನ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ನಂತರ ಪೊಲೀಸರು ಕಾರ್ಮಿಕರಿಗೆ ಬರಬೇಕಿದ್ದ ಕೂಲಿ ಹಣವನ್ನು ಕೊಡಿಸಿದ್ದಾರೆ. ಆದರೆ ಅತ್ಯಂತ ವಿಪರ್ಯಾಸವೆಂದರೆ, ಮಾನವೀಯತೆಯಿಂದ ಅನ್ಯಾಯಕ್ಕೊಳಗಾದ ಕಾರ್ಮಿಕರನ್ನು ರಕ್ಷಿಸಿ ಕರೆತಂದ ತಾವರೆಹಳ್ಳಿ ಗ್ರಾಮದ ಯುವಕರ ವಿರುದ್ಧವೇ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ!
ಜಿಲ್ಲೆಯಲ್ಲಿ ಜೀತ ಪದ್ಧತಿಯಂತಹ ಅನಿಷ್ಟ ಪದ್ಧತಿಗಳು ಇನ್ನೂ ಜೀವಂತವಾಗಿರುವುದು ಮತ್ತು ರಕ್ಷಣೆ ಮಾಡಿದವರ ಮೇಲೆಯೇ ಕಾನೂನು ಕ್ರಮ ಜರುಗಿಸಿರುವುದು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.