ರಾಮನಗರ: ಜಿಲ್ಲೆಯಲ್ಲಿ ತೀವ್ರಗೊಂಡಿರುವ ಆಟೋ ಗ್ಯಾಸ್ ಸಮಸ್ಯೆಯನ್ನು ಬಗೆಹರಿಸದ ಸರ್ಕಾರದ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ರೊಚ್ಚಿಗೆದ್ದಿದ್ದಾರೆ. ರಾಮನಗರದ ಐಜೂರು ವೃತ್ತದಲ್ಲಿ ಆಟೋ ಚಾಲಕರೊಂದಿಗೆ ಸೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ 'ಟಮಟೆ ಚಳುವಳಿ' ನಡೆಸುವ ಮೂಲಕ ಉಗ್ರ ಆಕ್ರೋಶ ಹೊರಹಾಕಿದ್ದಾರೆ.
ಉಪಚುನಾವಣೆ ಮೂಡ್ನಲ್ಲಿ ಸರ್ಕಾರಗಳು ಬ್ಯುಸಿ!
ಪ್ರತಿಭಟನೆಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಅವರು, "ರಾಜ್ಯದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡೂ ಕೇವಲ ಉಪಚುನಾವಣೆಯ ರಾಜಕಾರಣದಲ್ಲಿ ಮುಳುಗಿವೆ. ಜನಸಾಮಾನ್ಯರ, ಬಡವರ ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ," ಎಂದು ಗುಡುಗಿದರು. ಗ್ಯಾಸ್ ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಅವರು ನೇರವಾಗಿ ಆರೋಪಿಸಿದರು.
ಬಂಕ್ಗಳ ಮುಂದೆ ಕಾದೂ ಕಾದೂ ಸುಸ್ತಾದ ಆಟೋ ಚಾಲಕರು!
ರಾಮನಗರದಲ್ಲಿ ಪ್ರತಿನಿತ್ಯ ಆಟೋ ಚಾಲಕರು ಗ್ಯಾಸ್ಗಾಗಿ ಬಂಕ್ಗಳ ಮುಂದೆ ಗಂಟೆಗಟ್ಟಲೆ ಸರತಿಯ ಸಾಲಿನಲ್ಲಿ ನಿಲ್ಲಬೇಕಾದ ದುಸ್ಥಿತಿ ಎದುರಾಗಿದೆ. "ಆಟೋ ಚಾಲಕರು ಮತ್ತು ಹೋಟೆಲ್ ಮಾಲೀಕರ ಸಂಕಷ್ಟಕ್ಕೆ ಸರ್ಕಾರಗಳು ಸ್ಪಂದಿಸುತ್ತಿಲ್ಲ. ನಿತ್ಯ ಬಂಕ್ ಮುಂದೆ ಕಾದುಕಾದು ಆಟೋ ಚಾಲಕರು ಸುಸ್ತಾಗಿದ್ದಾರೆ. ದುಡಿಮೆ ಇಲ್ಲದೆ ಅವರ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಇಷ್ಟೆಲ್ಲಾ ಆದರೂ ಸರ್ಕಾರಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿವೆ," ಎಂದು ವಾಟಾಳ್ ಕಿಡಿಕಾರಿದರು.
ಬೃಹತ್ ಹೋರಾಟದ ಎಚ್ಚರಿಕೆ!
ಕೂಡಲೇ ಜಿಲ್ಲೆಯಲ್ಲಿನ ಅಡುಗೆ ಅನಿಲ ಮತ್ತು ಆಟೋ ಗ್ಯಾಸ್ ಸಮಸ್ಯೆಯನ್ನು ಸಮರೋಪಾದಿಯಲ್ಲಿ ಬಗೆಹರಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲಾ ಆಟೋ ಚಾಲಕರನ್ನು ಮತ್ತು ಸಂತ್ರಸ್ತರನ್ನು ಒಗ್ಗೂಡಿಸಿ ಸರ್ಕಾರದ ವಿರುದ್ಧ ಬೃಹತ್ ಮಟ್ಟದ ಹೋರಾಟ ರೂಪಿಸಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ಇದೇ ವೇಳೆ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು.