ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ವಿಭಿನ್ನ ಸ್ವರೂಪ ಪಡೆದುಕೊಳ್ಳುತ್ತಿದೆ. ಮನೆಯ ಮಾಲೀಕ ಒಳಗೆ ಗಾಢ ನಿದ್ರೆಯಲ್ಲಿದ್ದರೂ, ಕಿಂಚಿತ್ತೂ ಸುಳಿವು ನೀಡದೆ ಹೆಲ್ಮೆಟ್ ಧರಿಸಿ ಬಂದ ಕಳ್ಳರು ಭರ್ಜರಿ ಬೇಟೆಯಾಡಿರುವ ಘಟನೆ ಸಂಜಯನಗರದ ರಾಮಕೃಷ್ಣ ಬಡಾವಣೆಯಲ್ಲಿ ನಡೆದಿದೆ.
ನಿದ್ರೆಯಲ್ಲಿದ್ದ ಮಾಲೀಕ; ಹೊತ್ತೊಯ್ದರು 9 ಲಕ್ಷದ ಮಾಲು!
ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಳ್ಳರು ಬೈಕ್ನಲ್ಲಿ ಬಂದು ತಮ್ಮ ಗುರುತು ಸಿಗದಂತೆ ಹೆಲ್ಮೆಟ್ ಧರಿಸಿಯೇ ಕೃತ್ಯ ಎಸಗಿದ್ದಾರೆ. ಮನೆಯ ಬಾಗಿಲು ಮುರಿದು ಒಳನುಗ್ಗಿದ ಖದೀಮರು ಬರೋಬ್ಬರಿ 160 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ ಮತ್ತು 5 ಲಕ್ಷದ 30 ಸಾವಿರ ರೂಪಾಯಿ ನಗದು ಸೇರಿದಂತೆ ಒಟ್ಟು 9 ಲಕ್ಷದ 30 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಗಮನಾರ್ಹವೆಂದರೆ, ಕಳ್ಳತನ ನಡೆಯುವ ಸಮಯದಲ್ಲಿ ಮನೆಯ ಮಾಲೀಕ ರೂಮ್ನಲ್ಲೇ ಮಲಗಿದ್ದರು. ಕಳ್ಳರು ಬಾಗಿಲು ಮುರಿದು ಎಲ್ಲವನ್ನೂ ಹೊತ್ತೊಯ್ಯುತ್ತಿದ್ದರೂ ಮಾಲೀಕನಿಗೆ ಇದರ ಕಿಂಚಿತ್ತೂ ಸುಳಿವು ಸಿಕ್ಕಿಲ್ಲ ಎಂಬುದು ಅಚ್ಚರಿಯ ಸಂಗತಿ.
ತಮ್ಮನಿಗೆ ಕಾದಿತ್ತು ಶಾಕ್!
ಕಳ್ಳತನ ನಡೆದ ಕೆಲ ಸಮಯದ ನಂತರ ಮನೆಗೆ ಬಂದ ಮಾಲೀಕನ ತಮ್ಮನಿಗೆ ಮನೆಯಲ್ಲಿದ್ದ ಹಣ ಮತ್ತು ಒಡವೆ ಮಾಯವಾಗಿರುವುದು ಕಂಡುಬಂದಿದೆ. ಗಾಬರಿಯಿಂದ ರೂಮ್ನಲ್ಲಿದ್ದ ಅಣ್ಣನನ್ನು ಎಬ್ಬಿಸಿ ವಿಚಾರಿಸಿದಾಗ, "ನನಗೆ ಕಳ್ಳತನ ಆಗಿರುವುದು ಗೊತ್ತೇ ಇಲ್ಲ" ಎಂದು ಅಣ್ಣ ಉತ್ತರ ನೀಡಿದ್ದಾರೆ. ಇದರಿಂದ ಶಾಕ್ ಆದ ಕುಟುಂಬಸ್ಥರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕೈಚಳಕ
ಕಳ್ಳರು ಬೈಕ್ನಲ್ಲಿ ಬರುವುದು ಮತ್ತು ಹೆಲ್ಮೆಟ್ ಧರಿಸಿಕೊಂಡೇ ಮನೆಯೊಳಗೆ ಚಟುವಟಿಕೆ ನಡೆಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳ ಆಧಾರದ ಮೇಲೆ ಸಂಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಖದೀಮರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಜನನಿಬಿಡ ಪ್ರದೇಶದಲ್ಲೇ ಇಂತಹ ಧೈರ್ಯದ ಕಳ್ಳತನ ನಡೆದಿರುವುದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.