Skip to main content
ವಿಡಿಯೋ
crime

ಬೆಳಗಾವಿಯಲ್ಲಿ ಮರ್ಯಾದಾ ಹತ್ಯೆ: ಪ್ರಿಯಕರನ ಜೊತೆ ಹೋಗಿದ್ದಕ್ಕೆ ತಂಗಿಗೆ ವಿಷವಿಕ್ಕಿ ಕೊಂದ ಅಣ್ಣಂದಿರು!

By Bhavana Gowda
ಬೆಳಗಾವಿಯಲ್ಲಿ ಮರ್ಯಾದಾ ಹತ್ಯೆ: ಪ್ರಿಯಕರನ ಜೊತೆ ಹೋಗಿದ್ದಕ್ಕೆ ತಂಗಿಗೆ ವಿಷವಿಕ್ಕಿ ಕೊಂದ ಅಣ್ಣಂದಿರು!

ಸೌದತ್ತಿ ತಾಲೂಕಿನ ಸತ್ಯವ್ವ ಎಂಬಾಕೆ ಫೆಬ್ರವರಿ 17ರಂದು ತನ್ನ ಪ್ರಿಯಕರ ಕೃಷ್ಣನ ಜೊತೆ ಓಡಿ ಹೋಗಿದ್ದಳು. ಸೌದತ್ತಿ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಇಬ್ಬರೂ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಬೆಳಗಾವಿ: ರಾಜ್ಯದಲ್ಲಿ ಮರ್ಯಾದಾ ಹತ್ಯೆ ತಡೆಗೆ ಸರ್ಕಾರ ಕಠಿಣ ಕಾನೂನು ಜಾರಿಗೆ ತಂದಿದ್ದರೂ, ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಕುಟುಂಬದ ಗೌರವದ ಹೆಸರಿನಲ್ಲಿ ಯುವತಿಯೊಬ್ಬಳನ್ನು ಆಕೆಯ ರಕ್ತಸಂಬಂಧಿಗಳೇ ವಿಷವಿಕ್ಕಿ ಕೊಲೆ ಮಾಡಿ, ಸಾಕ್ಷಿ ನಾಶಕ್ಕೆ ಶವ ಸುಟ್ಟಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ಪ್ರೇಮದ ಹಾದಿ ಹಿಡಿದಿದ್ದೇ ತಪ್ಪಾಯಿತೇ?

ಸೌದತ್ತಿ ತಾಲೂಕಿನ ಸತ್ಯವ್ವ ಎಂಬಾಕೆ ಫೆಬ್ರವರಿ 17ರಂದು ತನ್ನ ಪ್ರಿಯಕರ ಕೃಷ್ಣನ ಜೊತೆ ಓಡಿ ಹೋಗಿದ್ದಳು. ಸೌದತ್ತಿ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಇಬ್ಬರೂ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದರೆ, 15 ದಿನಗಳ ನಂತರ ಕುಟುಂಬಸ್ಥರು ಇಬ್ಬರನ್ನೂ ಪತ್ತೆ ಹಚ್ಚಿ ಮನೆಗೆ ಕರೆತಂದಿದ್ದರು. ಆರಂಭದಲ್ಲಿ ರಾಜಿ ಸಂಧಾನದ ನಾಟಕವಾಡಿದ್ದ ಕುಟುಂಬಸ್ಥರು, ನಂತರ ಸತ್ಯವ್ವಳನ್ನು ಮಹಾರಾಷ್ಟ್ರದ ಶಿರೋಳದಲ್ಲಿರುವ ಆಕೆಯ ಅಕ್ಕನ ಮನೆಗೆ ಕಳುಹಿಸಿದ್ದರು.

ವಿಕೃತ ಸಂಚು: ವಿಷವಿಕ್ಕಿ ಕೊಲೆ, ಸ್ಮಶಾನದಲ್ಲಿ ದಹನ

ಕೃಷ್ಣನನ್ನು ಮರೆತುಬಿಡುವಂತೆ ಕುಟುಂಬದವರು ಸತ್ಯವ್ವಳಿಗೆ ಸತತವಾಗಿ ಒತ್ತಡ ಹೇರಿದ್ದಾರೆ. ಆದರೆ ಆಕೆ ತನ್ನ ಪ್ರೀತಿಯ ನಿರ್ಧಾರದಿಂದ ಹಿಂದೆ ಸರಿಯದಿದ್ದಾಗ, ಮನೆಯವರೇ ಆಕೆಯನ್ನು ಮುಗಿಸಲು ಸಂಚು ರೂಪಿಸಿದ್ದಾರೆ.

ಮಾರ್ಚ್ 21: ಸತ್ಯವ್ವಳನ್ನು ಅರಗ ಗ್ರಾಮಕ್ಕೆ ಕರೆದೊಯ್ದ ಸಂಬಂಧಿಕರು ಆಕೆಗೆ ಬಲವಂತವಾಗಿ ವಿಷ ಕುಡಿಸಿದ್ದಾರೆ.

ಸಾಕ್ಷಿ ನಾಶ: ಹತ್ಯೆಯ ನಂತರ ಯಾವುದೇ ಕುರುಹು ಸಿಗಬಾರದೆಂದು ಆಕೆಯ ಬಟ್ಟೆ ಹಾಗೂ ಹಾಸಿಗೆಯ ಸಮೇತ ಶವವನ್ನು ಮಹಾರಾಷ್ಟ್ರದ ಸ್ಮಶಾನದಲ್ಲೇ ಸುಟ್ಟು ಹಾಕಿದ್ದಾರೆ. ಕೃತ್ಯದ ಬಳಿಕ ಏನೂ ಅರಿಯದವರಂತೆ ಆರೋಪಿಗಳು ತಮ್ಮೂರಿಗೆ ವಾಪಸ್ ಬಂದಿದ್ದರು.

ಪತ್ತೆಯಾಗಿದ್ದು ಹೇಗೆ?

ಸತ್ಯವ್ವಳ ಸಂಪರ್ಕ ಸಿಗದಿದ್ದಾಗ ಗಾಬರಿಗೊಂಡ ಪ್ರಿಯಕರ ಕೃಷ್ಣ, ಆಕೆಗೆ ಏನೋ ಅಪಾಯ ಸಂಭವಿಸಿದೆ ಎಂದು ಅನುಮಾನಿಸಿ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದನು. ಸಿಪಿಐ ಜಾವೇದ್ ಮುಶಪೂರಿ ನೇತೃತ್ವದಲ್ಲಿ ತನಿಖೆ ನಡೆಸಿದ ಪೊಲೀಸರು, ಸತ್ಯವ್ವಳ ಅಣ್ಣ ಶಾನೂರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯ ರಹಸ್ಯ ಬಯಲಾಗಿದೆ.

ಬಂಧಿತ ಆರೋಪಿಗಳು

"ನಮ್ಮ ಕುಟುಂಬದ ಮರ್ಯಾದೆ ತೆಗೆದಿದ್ದಕ್ಕೆ ತಂಗಿಯನ್ನು ಕೊಂದೆವು" ಎಂದು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ:

ಶಾನೂರ (ಸತ್ಯವ್ವಳ ಅಣ್ಣ)

ಪ್ರಕಾಶ (ಚಿಕ್ಕಪ್ಪ)

ಕಲ್ಲಪ್ಪ (ಬಾವ)

ಹುಬ್ಬಳ್ಳಿಯಲ್ಲಿ ನಡೆದಿದ್ದ ಮರ್ಯಾದಾ ಹತ್ಯೆ ಪ್ರಕರಣದ ಬೆನ್ನಲ್ಲೇ ಬೆಳಗಾವಿಯಲ್ಲಿ ಇಂತಹದ್ದೇ ಘಟನೆ ಮರುಕಳಿಸಿರುವುದು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ.