Skip to main content
ವಿಡಿಯೋ
politics

ಕಾಂಗ್ರೆಸ್‌ನ 'ಮಹಿಳಾ ವಿರೋಧಿ' ನೀತಿ ವಿರುದ್ಧ ಬಿಜೆಪಿ ಆಕ್ರೋಶ: ಏಪ್ರಿಲ್ 25ರಿಂದ ರಾಜ್ಯಾದ್ಯಂತ ಬೃಹತ್ ಹೋರಾಟ..!

By Bhavana Gowda
ಕಾಂಗ್ರೆಸ್‌ನ 'ಮಹಿಳಾ ವಿರೋಧಿ' ನೀತಿ ವಿರುದ್ಧ ಬಿಜೆಪಿ ಆಕ್ರೋಶ: ಏಪ್ರಿಲ್ 25ರಿಂದ ರಾಜ್ಯಾದ್ಯಂತ ಬೃಹತ್ ಹೋರಾಟ..!

"ಕಾಂಗ್ರೆಸ್ ಪಕ್ಷಕ್ಕೆ ಕೇವಲ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮಾತ್ರ ಮಹಿಳೆಯರಂತೆ ಕಾಣುತ್ತಾರೆ. ಸಾಮಾನ್ಯ ಮಹಿಳೆಯರಿಗೆ ಸಿಗಬೇಕಾದ ಹಕ್ಕು ಮತ್ತು ಅವಕಾಶಗಳನ್ನು ಈ ಪಕ್ಷ ಕಿತ್ತುಕೊಂಡಿದೆ," ಎಂದು ಸಿ. ಮಂಜುಳಾ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಇಂಡಿ (I.N.D.I) ಒಕ್ಕೂಟದ ಮಹಿಳಾ ವಿರೋಧಿ ಧೋರಣೆಯನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾದ್ಯಂತ ಬೃಹತ್ ಹೋರಾಟಕ್ಕೆ ಕರೆ ನೀಡಿದೆ. ಏಪ್ರಿಲ್ 25ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ 'ಆಕ್ರೋಶ ಯಾತ್ರೆ' ಮತ್ತು ಸಭೆಗಳನ್ನು ನಡೆಸಲಾಗುವುದು ಎಂದು ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು. ಸಿ. ಮಂಜುಳಾ ತಿಳಿಸಿದ್ದಾರೆ. ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೋರಾಟದ ನೀಲನಕ್ಷೆಯನ್ನು ಬಿಡುಗಡೆ ಮಾಡಿದರು.

ಹೋರಾಟದ ಹಂತಗಳು:

ಏಪ್ರಿಲ್ 25: ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಕ್ರೋಶ ಯಾತ್ರೆ ಮತ್ತು ಸಾರ್ವಜನಿಕ ಸಭೆಗಳು.

ಏಪ್ರಿಲ್ 27ರಿಂದ: ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳು ಹಾಗೂ ಬಿಜೆಪಿಯ 300 ಸಂಘಟನಾತ್ಮಕ ಮಂಡಲಗಳಲ್ಲಿ ಸರಣಿ ಪ್ರತಿಭಟನೆ.

ಬೃಹತ್ ರ್ಯಾಲಿ: ಹೋರಾಟದ ಭಾಗವಾಗಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಬೃಹತ್ ರ್ಯಾಲಿಗಳನ್ನು ಸಂಘಟಿಸಲು ಪಕ್ಷ ಚಿಂತನೆ ನಡೆಸುತ್ತಿದೆ.

ಕೇಂದ್ರ ನಾಯಕರಿಂದ ಪತ್ರಿಕಾಗೋಷ್ಠಿ:

ಕಾಂಗ್ರೆಸ್‌ನ ಮಹಿಳಾ ವಿರೋಧಿ ನೀತಿಗಳನ್ನು ಜನರಿಗೆ ತಲುಪಿಸಲು ಬಿಜೆಪಿಯ ಪ್ರಮುಖ ನಾಯಕರು ವಿವಿಧೆಡೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ:

ಶಿವಮೊಗ್ಗ ಹಾಗೂ ಮಂಗಳೂರು: ಈಗಾಗಲೇ ಬಿ.ವೈ. ರಾಘವೇಂದ್ರ ಮತ್ತು ಬೃಜೇಶ್ ಚೌಟ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಬೆಳಗಾವಿ: ಮಾಜಿ ಸಿಎಂ ಜಗದೀಶ ಶೆಟ್ಟರ್ (ನಾಳೆ/ನಾಡಿದ್ದು).

ಹಾವೇರಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ.

ಮೈಸೂರು: ಕೇಂದ್ರ ಸಚಿವ ವಿ. ಸೋಮಣ್ಣ (ಏಪ್ರಿಲ್ 23).

"ಸಾಮಾನ್ಯ ಮಹಿಳೆಯರಿಗೆ ಅವಕಾಶವಿಲ್ಲ"

"ಕಾಂಗ್ರೆಸ್ ಪಕ್ಷಕ್ಕೆ ಕೇವಲ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮಾತ್ರ ಮಹಿಳೆಯರಂತೆ ಕಾಣುತ್ತಾರೆ. ಸಾಮಾನ್ಯ ಮಹಿಳೆಯರಿಗೆ ಸಿಗಬೇಕಾದ ಹಕ್ಕು ಮತ್ತು ಅವಕಾಶಗಳನ್ನು ಈ ಪಕ್ಷ ಕಿತ್ತುಕೊಂಡಿದೆ," ಎಂದು ಸಿ. ಮಂಜುಳಾ ಆಕ್ರೋಶ ವ್ಯಕ್ತಪಡಿಸಿದರು.

"ಭಾರತದ ನಾರಿಯರು ಕೇವಲ ಹೂವಲ್ಲ; ಅನ್ಯಾಯದ ವಿರುದ್ಧ ಸಿಡಿದೇಳುವ ಜ್ವಾಲೆ ಕೂಡ ಹೌದು ಎಂಬುದನ್ನು ನಾವು ಈ ಹೋರಾಟದ ಮೂಲಕ ತೋರಿಸಿಕೊಡಲಿದ್ದೇವೆ."

— ಕು. ಸಿ. ಮಂಜುಳಾ, ರಾಜ್ಯ ಅಧ್ಯಕ್ಷೆ, ಮಹಿಳಾ ಮೋರ್ಚಾ.

ಕಾಂಗ್ರೆಸ್‌ನ ಇತಿಹಾಸವೇ ಮಹಿಳಾ ವಿರೋಧಿ ಧೋರಣೆಯಿಂದ ಕೂಡಿದೆ ಎಂದು ಟೀಕಿಸಿದ ಅವರು, ಮುಂಬರುವ ದಿನಗಳಲ್ಲಿ ಈ ಹೋರಾಟವನ್ನು ತಳಮಟ್ಟದವರೆಗೂ ಕೊಂಡೊಯ್ಯುವುದಾಗಿ ತಿಳಿಸಿದರು.