Skip to main content
ವಿಡಿಯೋ
politics

"ಐಟಿ, ಇಡಿ ಆಯ್ತು ಈಗ ರಾಜ್ಯಪಾಲರ ಸರದಿ": ಕೇಂದ್ರ ಸರ್ಕಾರದ ವಿರುದ್ಧ ಡಿ.ಕೆ. ಸುರೇಶ್ ವಾಗ್ದಾಳಿ..!

By Bhavana Gowda
"ಐಟಿ, ಇಡಿ ಆಯ್ತು ಈಗ ರಾಜ್ಯಪಾಲರ ಸರದಿ": ಕೇಂದ್ರ ಸರ್ಕಾರದ ವಿರುದ್ಧ ಡಿ.ಕೆ. ಸುರೇಶ್ ವಾಗ್ದಾಳಿ..!

"ಟಿವಿಕೆಗೆ ಸರ್ಕಾರ ರಚಿಸಲು ಸಾಂವಿಧಾನಿಕ ಅವಕಾಶವಿದೆ ಮತ್ತು ಅವರ ಬಳಿ ಅಗತ್ಯ ಸಂಖ್ಯಾಬಲವೂ ಇದೆ. ಆದರೂ ವಿಳಂಬ ಮಾಡುತ್ತಿರುವ ರಾಜ್ಯಪಾಲರ ನಡೆ ಅನುಮಾನ ಮೂಡಿಸುತ್ತಿದೆ," ಎಂದರು.

ರಾಮನಗರ: ತಮಿಳುನಾಡಿನ ರಾಜಕೀಯ ವಿದ್ಯಮಾನಗಳು, ಪಶ್ಚಿಮ ಬಂಗಾಳದ ರಾಜಕೀಯ ಪಿತೂರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಿಗಲಿರುವ 'ಶುಭಸುದ್ದಿ'ಯ ಕುರಿತು ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಚನ್ನಪಟ್ಟಣದಲ್ಲಿ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.

ರಾಜ್ಯಪಾಲರ ಕಚೇರಿ ಮೂಲಕ ಕೇಂದ್ರದ ಬೆದರಿಕೆ ತಂತ್ರ

ತಮಿಳುನಾಡಿನಲ್ಲಿ ಟಿವಿಕೆ (TVK) ಸರ್ಕಾರ ರಚನೆಗೆ ರಾಜ್ಯಪಾಲರು ವಿಳಂಬ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಸುರೇಶ್, "ಟಿವಿಕೆಗೆ ಸರ್ಕಾರ ರಚಿಸಲು ಸಾಂವಿಧಾನಿಕ ಅವಕಾಶವಿದೆ ಮತ್ತು ಅವರ ಬಳಿ ಅಗತ್ಯ ಸಂಖ್ಯಾಬಲವೂ ಇದೆ. ಆದರೂ ವಿಳಂಬ ಮಾಡುತ್ತಿರುವ ರಾಜ್ಯಪಾಲರ ನಡೆ ಅನುಮಾನ ಮೂಡಿಸುತ್ತಿದೆ," ಎಂದರು. ಇದರ ಹಿಂದೆ ಕೇಂದ್ರದ ಬಿಜೆಪಿ ಸರ್ಕಾರದ ಕೈವಾಡವಿದ್ದು, ಈ ಹಿಂದೆ ಐಟಿ, ಇಡಿ ಮತ್ತು ಸಿಬಿಐ ಬಳಸುತ್ತಿದ್ದ ಬಿಜೆಪಿ ಈಗ ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಬೆದರಿಕೆ ತಂತ್ರ ಅನುಸರಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಟಿವಿಕೆಗೆ ಕಾಂಗ್ರೆಸ್ ಬೆಂಬಲದ ಬಗ್ಗೆ ಸ್ಪಷ್ಟನೆ

ತಮಿಳುನಾಡಿನಲ್ಲಿ ಡಿಎಂಕೆ ಬಿಟ್ಟು ಕಾಂಗ್ರೆಸ್ ಟಿವಿಕೆಗೆ ಬೆಂಬಲ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಅಲ್ಲಿನ ನಾಯಕರ ಗಮನಕ್ಕೆ ತಂದೇ ನಮ್ಮ ಪಕ್ಷ ಈ ತೀರ್ಮಾನ ಕೈಗೊಂಡಿದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರ ರಚನೆಗೆ ಬೆಂಬಲ ನೀಡುವುದು ಸಾಮಾನ್ಯ ಪ್ರಕ್ರಿಯೆ. ಡಿಎಂಕೆ ಕೂಡ ತಾನು ಮೌನವಾಗಿರುವುದಾಗಿ ಸ್ಪಷ್ಟಪಡಿಸಿದೆ," ಎಂದು ತಿಳಿಸಿದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ರಾಜಕೀಯ ಪಿತೂರಿ

ಪಶ್ಚಿಮ ಬಂಗಾಳದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಮಾತನಾಡುತ್ತಾ, "ಅಲ್ಲಿ ಹಣಬಲ ಮತ್ತು ತೋಳ್ಬಲದ ಪ್ರದರ್ಶನವಾಗಿದೆ. ಕಳೆದ ಒಂದು ವರ್ಷದಿಂದ ಅಲ್ಲಿನ ಸರ್ಕಾರವನ್ನು ಉರುಳಿಸಲು ಬಿಜೆಪಿ ನಿರಂತರ ಪ್ರಯತ್ನ ಮಾಡಿದೆ. ಸುಮಾರು 97 ಲಕ್ಷ ಮತದಾರರನ್ನು ಪಟ್ಟಿಯಿಂದ ಹೊರಹಾಕುವ ಮೂಲಕ ವ್ಯವಸ್ಥಿತ ಪಿತೂರಿ ನಡೆಸಿ ಟಿಎಂಸಿಗೆ ಹಿನ್ನಡೆ ಉಂಟುಮಾಡಲಾಗಿದೆ," ಎಂದು ದೂರಿದರು.

ಮೇ 15ರ 'ಶುಭಸುದ್ದಿ' ಮತ್ತು ಡಿ.ಕೆ. ಶಿವಕುಮಾರ್ ಜನ್ಮದಿನ

ಇದೇ ಮೇ 15ರಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶುಭಸುದ್ದಿ ಸಿಗಲಿದೆ ಎಂಬ ಸುದ್ದಿಗಳ ಬಗ್ಗೆ ಉತ್ತರಿಸಿದ ಡಿ.ಕೆ. ಸುರೇಶ್, "ಮೇ 15 ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬ ಎಂಬುದು ಮಾತ್ರ ನನಗೆ ಗೊತ್ತು. ಶುಭಸುದ್ದಿಯ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಒಳ್ಳೆಯದಾಗುವ ನಿರೀಕ್ಷೆಯಿದೆ, ಕಾದು ನೋಡೋಣ," ಎಂದು ಮಂದಹಾಸದೊಂದಿಗೆ ಉತ್ತರಿಸಿದರು.