Skip to main content
ವಿಡಿಯೋ
politics

ಅಹಿಂದ ಹೆಸರಲ್ಲಿ ಸಿದ್ದರಾಮಯ್ಯ ಮೋಸ ಮಾಡುತ್ತಿದ್ದಾರೆ: ರಾಜ್ಯ ಸರ್ಕಾರದ ವಿರುದ್ಧ ಬಸವರಾಜ್ ಬೊಮ್ಮಾಯಿ ಗರಂ..!

By Bhavana Gowda
ಅಹಿಂದ ಹೆಸರಲ್ಲಿ ಸಿದ್ದರಾಮಯ್ಯ ಮೋಸ ಮಾಡುತ್ತಿದ್ದಾರೆ: ರಾಜ್ಯ ಸರ್ಕಾರದ ವಿರುದ್ಧ ಬಸವರಾಜ್ ಬೊಮ್ಮಾಯಿ ಗರಂ..!

ಈ ಸಭೆಯು ರಾಜ್ಯ ರಾಜಕಾರಣದಲ್ಲಿ ಮೀಸಲಾತಿ ಕುರಿತಾದ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಹೋರಾಟಕ್ಕೆ ಸಜ್ಜಾಗುತ್ತಿದೆ.

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ SC, ST ಮತ್ತು OBC ಸಮುದಾಯಗಳಿಗೆ ಭಾರಿ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿಂದು ತಮ್ಮ ಪಕ್ಷದ ಪ್ರಮುಖ ನಾಯಕರೊಂದಿಗೆ ಹಮ್ಮಿಕೊಂಡಿದ್ದ ಅನೌಪಚಾರಿಕ ಸಭೆಯ ನಂತರ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅಹಿಂದ ಹೆಸರಲ್ಲಿ ರಾಜಕಾರಣ

"ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಯಾವ ವರ್ಗಗಳಿಂದ ಬೆಂಬಲ ಪಡೆದು ಅಧಿಕಾರಕ್ಕೆ ಬಂದರೋ, ಅದೇ ವರ್ಗಗಳಿಗೆ ಈಗ ಅನ್ಯಾಯ ಮಾಡುತ್ತಿದ್ದಾರೆ" ಎಂದು ಬೊಮ್ಮಾಯಿ ಆರೋಪಿಸಿದರು. ಒಳ ಮೀಸಲಾತಿ ಜಾರಿಗೆ ತರುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮತ್ತು ವಿವಿಧ ಆಯೋಗಗಳ ವರದಿಗಳಿದ್ದರೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಅವರು ದೂರಿದರು.

ಒಳ ಮೀಸಲಾತಿ ಜಾರಿಗೆ ವಿಳಂಬ ಏಕೆ?

ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಹಲವು ರಾಜ್ಯಗಳು ಈಗಾಗಲೇ ಕ್ರಮ ಕೈಗೊಂಡಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ವಿಳಂಬವಾಗುತ್ತಿದೆ. ಈ ಬಗ್ಗೆ ಮಾತನಾಡಿದ ಬೊಮ್ಮಾಯಿ, "ನಾನು ಸಿಎಂ ಆಗಿದ್ದಾಗ ನಾಗಮೋಹನ್ ದಾಸ್ ಕಮಿಟಿ ವರದಿ ಬಗ್ಗೆ ಸರ್ವಪಕ್ಷ ಸಭೆ ಕರೆದು ಚರ್ಚಿಸಿ ಒಪ್ಪಿಗೆ ಪಡೆದಿದ್ದೆವು. ಅದರ ಫಲವಾಗಿ ಇಂದು 1,400 ಹೆಚ್ಚುವರಿ SC/ST ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತಿದೆ. ಆದರೆ ಈ ಸರ್ಕಾರ ಸುಪ್ರೀಂ ಆದೇಶವಾಗಲಿ, ಸದಾಶಿವ ಆಯೋಗದ ವರದಿಯಾಗಲಿ ಅಥವಾ ಮಾಧುಸ್ವಾಮಿ ಕಮಿಟಿ ವರದಿಯಾಗಲಿ ಯಾವುದನ್ನೂ ಪಾಲಿಸುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆಯ ಆರೋಪ

ಸರ್ಕಾರವು ಸಮುದಾಯಗಳ ನಡುವೆ ಸಂಘರ್ಷ ಉಂಟುಮಾಡುತ್ತಿದೆ ಎಂದು ಆರೋಪಿಸಿದ ಅವರು, "SC ಮೀಸಲಾತಿಯನ್ನು 15% ಮಾಡುತ್ತೇವೆ ಎಂದು ಹೇಳಿ ಕೋರ್ಟ್‌ನಲ್ಲಿ ಸರಿಯಾದ ವಾದ ಮಂಡಿಸಿಲ್ಲ. ಸುಪ್ರೀಂ ಕೋರ್ಟ್ ಆದೇಶವನ್ನೂ ಈ ಸರ್ಕಾರ ಉಲ್ಲಂಘಿಸಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಮ್ಮ ಪಕ್ಷ ನಿರ್ಧರಿಸಿದೆ" ಎಂದರು.

ಹೋರಾಟಕ್ಕೆ ನಿರ್ಧಾರ

SC/ST ಮತ್ತು OBC ಸಮುದಾಯಗಳಿಗೆ ನೈಜ ನ್ಯಾಯ ಕೊಡಿಸಲು ಬಿಜೆಪಿ ನಿರ್ಧರಿಸಿದೆ. "ನಮ್ಮ ಪಕ್ಷದ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಗೋವಿಂದ ಕಾರಜೋಳ, ಎನ್. ರವಿಕುಮಾರ್ ಮತ್ತು ಎನ್. ಮಹೇಶ್ ಅವರನ್ನೊಳಗೊಂಡ ತಂಡವು ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ತೀರ್ಮಾನಿಸಿದೆ. ರಾಜ್ಯಾಧ್ಯಕ್ಷರ ಮುಂದಿಟ್ಟು ಈ ಹೋರಾಟದ ಮುಂದಿನ ಹಂತಗಳನ್ನು ನಿರ್ಧರಿಸಲಾಗುವುದು" ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು. ಈ ಸಭೆಯು ರಾಜ್ಯ ರಾಜಕಾರಣದಲ್ಲಿ ಮೀಸಲಾತಿ ಕುರಿತಾದ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಹೋರಾಟಕ್ಕೆ ಸಜ್ಜಾಗುತ್ತಿದೆ.