Skip to main content
ವಿಡಿಯೋ
crime

ಮಂಡ್ಯ, ಮೈಸೂರಲ್ಲಿ ‘ಮೂಗ-ಕಿವುಡ’ನ ಹೈಟೆಕ್ ಕೈಚಳಕ: ದೇಣಿಗೆ ನೆಪದಲ್ಲಿ ಬಂದು ಮೊಬೈಲ್ ಎಗರಿಸುವ ಗ್ಯಾಂಗ್ ಸಕ್ರಿಯ..!

By Bhavana Gowda
ಮಂಡ್ಯ, ಮೈಸೂರಲ್ಲಿ ‘ಮೂಗ-ಕಿವುಡ’ನ ಹೈಟೆಕ್ ಕೈಚಳಕ: ದೇಣಿಗೆ ನೆಪದಲ್ಲಿ ಬಂದು ಮೊಬೈಲ್ ಎಗರಿಸುವ ಗ್ಯಾಂಗ್ ಸಕ್ರಿಯ..!

ಕಳ್ಳತನ ಮಾಡಿ ಕಚೇರಿಯಿಂದ ಹೊರಗೆ ಬರುತ್ತಿದ್ದಂತೆ, ಹೊರಗೆ ಬೈಕ್ ಸ್ಟಾರ್ಟ್ ಮಾಡಿಕೊಂಡು ಸಿದ್ಧವಾಗಿ ನಿಂತಿರುವ ಆತನ ಸಹಚರನೊಂದಿಗೆ ಕ್ಷಣಾರ್ಧದಲ್ಲಿ ಪರಾರಿಯಾಗುತ್ತಾನೆ.

ಮಂಡ್ಯ: ನೀವು ಬ್ಯಾಂಕ್, ಪೋಸ್ಟ್ ಆಫೀಸ್ ಅಥವಾ ಯಾವುದಾದರೂ ಅಂಗಡಿಗಳಿಗೆ ಹೋದಾಗ ಸ್ವಲ್ಪ ಆ ಕಡೆ ಮುಖ ಮಾಡಿದರೆ ಸಾಕು, ನಿಮ್ಮ ಕೈಯಲ್ಲೋ ಅಥವಾ ಟೇಬಲ್ ಮೇಲೋ ಇಟ್ಟಿರುವ ಮೊಬೈಲ್ ಫೋನ್ ‘ಮಂಗಮಾಯ’ವಾಗುತ್ತದೆ! ಹೌದು, ಸದ್ಯ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ವಿಭಿನ್ನ ಶೈಲಿಯ ಮೊಬೈಲ್ ಕಳ್ಳರ ಗ್ಯಾಂಗ್ ಒಂದು ಫುಲ್ ಆಕ್ಟಿವ್ ಆಗಿದ್ದು, ಸಾರ್ವಜನಿಕರ ನಿದ್ದೆಗೆಡಿಸಿದೆ.

ಕಿವುಡ ಮತ್ತು ಮೂಗನಂತೆ ನಟಿಸಿ, ದೇಣಿಗೆ ಸಂಗ್ರಹಿಸುವ ನೆಪದಲ್ಲಿ ಬಂದು ಅತ್ಯಂತ ಚಾಣಾಕ್ಷತನದಿಂದ ಮೊಬೈಲ್ ಕಳುವು ಮಾಡುತ್ತಿರುವ ಖದೀಮನೊಬ್ಬನ ಕೃತ್ಯ ಈಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಳ್ಳತನದ ಪ್ಲಾನ್ ಹೇಗಿರುತ್ತೆ ಗೊತ್ತಾ?

ಟಾರ್ಗೆಟ್ ಸ್ಪಾಟ್ಸ್: ಜನಸಂದಣಿ ಹೆಚ್ಚಿರುವ ಬ್ಯಾಂಕ್‌ಗಳು, ಪೋಸ್ಟ್ ಆಫೀಸ್, ಜ್ಯುವೆಲರಿ ಶಾಪ್ ಹಾಗೂ ಮೊಬೈಲ್ ಅಂಗಡಿಗಳೇ ಈ ಗ್ಯಾಂಗ್‌ನ ಪ್ರಮುಖ ಟಾರ್ಗೆಟ್.

ವೇಟಿಂಗ್ ಗೇಮ್: ಕಳ್ಳ ಮೊದಲು ಬ್ಯಾಂಕ್ ಅಥವಾ ಕಚೇರಿ ಒಳಗೆ ಬಂದು ಸದ್ದಿಲ್ಲದೆ ಚೇರ್ ಮೇಲೆ ಕುಳಿತುಕೊಳ್ಳುತ್ತಾನೆ. ಕೌಂಟರ್ ಬಳಿ ಜನರು ಹೆಚ್ಚಾಗುವವರೆಗೆ ಕಾಯುತ್ತಾನೆ.

ಪೇಪರ್ ಅಡ್ಡ ಇಟ್ಟು ಕೈಚಳಕ: ಜನಜಂಗುಳಿ ಆರಂಭವಾಗುತ್ತಿದ್ದಂತೆ ಸಿಬ್ಬಂದಿ ಬಳಿ ಹೋಗಿ ತಾನು ಮೂಗ, ಕಿವುಡ ಎನ್ನುವಂತೆ ನಟಿಸುತ್ತಾ ದೇಣಿಗೆ ಕೇಳುವ ಪತ್ರವನ್ನು (ರಶೀದಿ/ಅರ್ಜಿ) ಮುಂದಿಡುತ್ತಾನೆ. ಸಿಬ್ಬಂದಿಯ ಗಮನ ಬೇರೆಡೆ ಸೆಳೆಯಲು ಆ ಪತ್ರವನ್ನು ಟೇಬಲ್ ಮೇಲಿರುವ ಮೊಬೈಲ್ ಫೋನ್ ಮೇಲೆ ಅಡ್ಡಲಾಗಿ ಇಡುತ್ತಾನೆ. ನಂತರ ಪೇಪರ್ ಎತ್ತುವ ನೆಪದಲ್ಲಿ ಅದರ ಕೆಳಗಿರುವ ಮೊಬೈಲ್ ಫೋನನ್ನು ಅತ್ಯಂತ ವೇಗವಾಗಿ ಎಗರಿಸಿ ಜೇಬಿಗೆ ಇಳಿಸಿಕೊಳ್ಳುತ್ತಾನೆ.

ಬೈಕ್‌ನಲ್ಲಿ ಎಸ್ಕೇಪ್: ಕಳ್ಳತನ ಮಾಡಿ ಕಚೇರಿಯಿಂದ ಹೊರಗೆ ಬರುತ್ತಿದ್ದಂತೆ, ಹೊರಗೆ ಬೈಕ್ ಸ್ಟಾರ್ಟ್ ಮಾಡಿಕೊಂಡು ಸಿದ್ಧವಾಗಿ ನಿಂತಿರುವ ಆತನ ಸಹಚರನೊಂದಿಗೆ ಕ್ಷಣಾರ್ಧದಲ್ಲಿ ಪರಾರಿಯಾಗುತ್ತಾನೆ.

ಮಂಡ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಕಳ್ಳತನ!

ಈ ಐನಾತಿ ಗ್ಯಾಂಗ್ ಮಂಡ್ಯದಲ್ಲಿ ಸರಣಿ ಕಳ್ಳತನ ಎಸಗಿದೆ. ಮಂಡ್ಯ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಸಿಬ್ಬಂದಿಯ ಗಮನ ಸರಿಸಿ ಮೊಬೈಲ್ ಕಳವು ಮಾಡಿದ್ದು, ಈ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಪಕ್ಕಾ ದಾಖಲಾಗಿದೆ.

ಇಷ್ಟಕ್ಕೇ ನಿಲ್ಲದ ಈ ಭೂಪ, ಅಲ್ಲಿಂದ ನೇರವಾಗಿ ಮಂಡ್ಯದ ವಿ.ವಿ. ರಸ್ತೆಯಲ್ಲಿರುವ ಪ್ರಧಾನ ಅಂಚೆ ಕಚೇರಿ (Main Post Office) ಗೆ ನುಗ್ಗಿ, ಅಲ್ಲೂ ಸಹ ಸಿಬ್ಬಂದಿಯೊಬ್ಬರ ಮೊಬೈಲ್ ಕದ್ದು ಎಸ್ಕೇಪ್ ಆಗಿದ್ದಾನೆ. ಸದ್ಯ ಮಂಡ್ಯ ಪಶ್ಚಿಮ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣಗಳು ನಡೆದಿವೆ.

ಮೈಸೂರಿನಲ್ಲೂ ಇದೇ ಮಾದರಿ ಕೃತ್ಯ!

ಮಂಡ್ಯದಲ್ಲಿ ತನ್ನ ಕೈಚಳಕ ಮುಗಿಸಿದ ಈ ಕಿಲಾಡಿ ಗ್ಯಾಂಗ್, ಮುಂದಿನ ಟಾರ್ಗೆಟ್ ಆಗಿ ಮೈಸೂರನ್ನು ಆರಿಸಿಕೊಂಡಿದೆ. ಮೈಸೂರಿನ ಪ್ರಸಿದ್ಧ ಚಿನ್ನದ ಅಂಗಡಿಯೊಂದಕ್ಕೂ ಇದೇ ರೀತಿ ದೇಣಿಗೆ ಪತ್ರ ಹಿಡಿದು ಎಂಟ್ರಿ ಕೊಟ್ಟ ಖದೀಮ, ಅಲ್ಲೂ ಸಹ ಅದೇ ಹಳೇ ಶೈಲಿಯಲ್ಲಿ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ.

ಸಾರ್ವಜನಿಕರೇ ಎಚ್ಚರ!

ಬ್ಯಾಂಕ್ ಅಥವಾ ಸಾರ್ವಜನಿಕ ಸ್ಥಳಗಳಿಗೆ ಹೋದಾಗ ಅಪರಿಚಿತರು ನಿಮ್ಮ ಬಳಿ ಬಂದು ಪೇಪರ್ ಅಥವಾ ಪತ್ರಗಳನ್ನು ತೋರಿಸಿ ಗಮನ ಹರಿಸಲು ಯತ್ನಿಸಿದರೆ ತಕ್ಷಣ ಜಾಗೃತರಾಗಿರಿ. ನಿಮ್ಮ ಮೊಬೈಲ್ ಹಾಗೂ ಬೆಲೆಬಾಳುವ ವಸ್ತುಗಳನ್ನು ಟೇಬಲ್ ಮೇಲಿಟ್ಟು ನಿರ್ಲಕ್ಷ್ಯ ವಹಿಸಬೇಡಿ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಈ ಖದೀಮರಿಗಾಗಿ ಜಾಲ ಬೀಸಿದ್ದಾರೆ.