ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರಿಗೆ ಬಂದು, ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ನಗರದಲ್ಲಿ ಸಂಚಾರ ಸಮಸ್ಯೆ ಉಂಟಾಗದಂತೆ ಬೆಂಗಳೂರು ಸಂಚಾರ ಪೊಲೀಸರು ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ಪಾರ್ಕಿಂಗ್ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿದ್ದಾರೆ.
ಬೆಳಿಗ್ಗೆ 10.30ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ, ಅಲ್ಲಿಂದ ಹೆಲಿಕಾಪ್ಟರ್ ಮತ್ತು ರಸ್ತೆ ಮಾರ್ಗದ ಮೂಲಕ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣ ತಲುಪಲಿದ್ದಾರೆ. ಅಲ್ಲಿ ಮೂರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ ನಂತರ, ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ತೆರಳಲಿದ್ದಾರೆ. ಬೆಳಿಗ್ಗೆ 11.45 ರಿಂದ ಮಧ್ಯಾಹ್ನ 12.50ರವರೆಗೆ ಅವರು ರಾಗಿಗುಡ್ಡದಿಂದ ಎಲೆಕ್ಟ್ರಾನಿಕ್ಸ್ ಸಿಟಿವರೆಗೆ ಮೆಟ್ರೋದಲ್ಲಿ ಪ್ರಯಾಣ ಮಾಡಲಿದ್ದಾರೆ.
ಇದನ್ನು ಓದಿ: ದೆಹಲಿಯಲ್ಲಿ ರಕ್ಷಾಬಂಧನದಂದು ಭಾರೀ ಮಳೆ: ಜಲಾವೃತದಿಂದ ಸಂಚಾರಕ್ಕೆ ತೊಂದರೆ..!
ಎಲೆಕ್ಟ್ರಾನಿಕ್ಸ್ ಸಿಟಿ ತಲುಪಿದ ನಂತರ, ಮೋದಿ ರಸ್ತೆ ಮಾರ್ಗದಿಂದ IIIT ಬೆಂಗಳೂರು ಕ್ಯಾಂಪಸ್ಗೆ ತೆರಳಿ ಹಳದಿ ಮಾರ್ಗವನ್ನು ಉದ್ಘಾಟಿಸುವುದರೊಂದಿಗೆ ಮೆಟ್ರೋ ಮೂರನೇ ಹಂತದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಮಧ್ಯಾಹ್ನ 2.45ಕ್ಕೆ ದೆಹಲಿಗೆ ಹಿಂತಿರುಗಲಿದ್ದಾರೆ. ಸಂಚಾರ ಪೊಲೀಸರ ಮಾಹಿತಿ ಪ್ರಕಾರ, ಬೆಳಿಗ್ಗೆ 8.30ರಿಂದ ಮಧ್ಯಾಹ್ನದವರೆಗೆ ಮಾರೇನಹಳ್ಳಿ ಮುಖ್ಯರಸ್ತೆ ಮತ್ತು ಈಸ್ಟ್ ಎಂಡ್ ಮುಖ್ಯರಸ್ತೆಯ ಕೆಲವು ಭಾಗಗಳಲ್ಲಿ ವಾಹನ ಸಂಚಾರ ನಿಲ್ಲಿಸಲಾಗುವುದು. ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಸಿಲ್ಕ್ ಬೋರ್ಡ್ನಿಂದ ಎಲೆಕ್ಟ್ರಾನಿಕ್ಸ್ ಸಿಟಿವರೆಗೆ ಇರುವ ಎಲಿವೇಟೆಡ್ ಎಕ್ಸ್ಪ್ರೆಸ್ವೇ, ಹೊಸೂರು ರಸ್ತೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಹಂತ 1ರ ಕೆಲವು ಒಳರಸ್ತೆಗಳಿಗೂ ನಿರ್ಬಂಧ ಇರುತ್ತದೆ.
ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳ ಸೂಚನೆ ಕೂಡ ನೀಡಲಾಗಿದೆ. ಮಾರೇನಹಳ್ಳಿ, ಜಯದೇವ ಆಸ್ಪತ್ರೆ, ಬನಶಂಕರಿ, ಸಾರಕ್ಕಿ ಮತ್ತು ಬೊಮ್ಮಸಂದ್ರ ಕಡೆಗೆ ಹೋಗುವವರು ಹೊರವರ್ತುಲ ರಸ್ತೆ, ಜಿಗಣಿ ರಸ್ತೆ ಅಥವಾ ಸರ್ಜಾಪುರ ರಸ್ತೆ ಬಳಸಬಹುದು. ಚಂದಾಪುರ, ದೊಮ್ಮಸಂದ್ರ ಮಾರ್ಗಗಳನ್ನು ಬಳಸಿಕೊಂಡು ವರ್ತೂರು, ವೈಟ್ಫೀಲ್ಡ್, ಹೊಸಕೋಟೆ ಕಡೆಗೂ ತೆರಳಬಹುದು.
ಮಾರೇನಹಳ್ಳಿ ಮುಖ್ಯರಸ್ತೆ, 4ನೇ ಮುಖ್ಯರಸ್ತೆ ಮತ್ತು 18ನೇ ಮುಖ್ಯರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದ್ದು, ಸಾರ್ವಜನಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳಲು ಹಾಗೂ ಸಾಧ್ಯವಾದರೆ ಸಾರ್ವಜನಿಕ ಸಾರಿಗೆ ಬಳಸಲು ಪೊಲೀಸರು ಮನವಿ ಮಾಡಿದ್ದಾರೆ.