ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ದಳ (ಎಸ್ಐಟಿ), ಪ್ರಮುಖ ಆರೋಪಿ ಬುರುಡೆ ಚಿನ್ನಯ್ಯನನ್ನು ವಿಚಾರಣೆ ನಡೆಸಿ ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಿದೆ. ಚಿನ್ನಯ್ಯ ನೀಡಿದ ಹೇಳಿಕೆಗಳ ಆಧಾರದ ಮೇಲೆ, ಪ್ರಕರಣಕ್ಕೆ ಸಂಬಂಧಿಸಿದ ಹಲವರ ವಿಚಾರಣೆಯನ್ನು ಎಸ್ಐಟಿ ಚುರುಕುಗೊಳಿಸಿದೆ. ಯಾವುದೇ ಕ್ಷಣದಲ್ಲಿ ಹೆಚ್ಚಿನ ಬಂಧನಗಳಾಗುವ ಸಾಧ್ಯತೆ ಇದೆ.
ಈ ಪ್ರಕರಣದಲ್ಲಿ ಸದ್ಯ ಆರು ಮಂದಿಗೆ ಸಂಕಷ್ಟ ಎದುರಾಗಿದೆ. ಗಿರೀಶ್ ಮಟ್ಟಣ್ಣನವರ್ ಅವರನ್ನು ಏಳು ದಿನಗಳಿಂದ, ಜಯಂತ್ ಅವರನ್ನು ಎಂಟು ದಿನಗಳಿಂದ ವಿಚಾರಣೆ ನಡೆಸಲಾಗುತ್ತಿದೆ. ಸೌಜನ್ಯ ಅವರ ಮಾವ ವಿಠ್ಠಲ ಗೌಡ ಮತ್ತು ಅವರ ಕಾರು ಚಾಲಕ ಪ್ರದೀಪ್ ಕೂಡ ತೀವ್ರ ವಿಚಾರಣೆಗೆ ಒಳಗಾಗಿದ್ದಾರೆ. ಯೂಟ್ಯೂಬರ್ಗಳಾದ ಅಭಿಷೇಕ್ ಮತ್ತು ಕೇರಳ ಮೂಲದ ಯೂಟ್ಯೂಬರ್ ಮನಫ್ ಅವರನ್ನು ಕ್ರಮವಾಗಿ ಏಳು ಮತ್ತು ಮೂರು ದಿನ ವಿಚಾರಣೆ ನಡೆಸಲಾಗಿದೆ.
ಗ್ಯಾಂಗ್ ರೇ*ಪ್: ಕಿವಿಯೂ ಕೇಳದ, ಮಾತು ಬಾರದ ಗರ್ಭಿಣಿಯ ಸಾವು..!
ವಿಚಾರಣೆಗೊಳಪಟ್ಟ ಪ್ರತಿಯೊಬ್ಬರ ಹೇಳಿಕೆಗಳನ್ನು ಪರಿಶೀಲಿಸಲಾಗುತ್ತಿದೆ. ವ್ಯತ್ಯಾಸ ಕಂಡುಬಂದರೆ ಬಂಧನ ಸಾಧ್ಯತೆ ಇದೆ. ಬಿಎನ್ಎಸ್ ಕಾಯ್ದೆಯ ಸೆಕ್ಷನ್ 161 ಅಡಿಯಲ್ಲಿ ಅವರ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ. ಬಲವಾದ ಸಾಕ್ಷ್ಯಗಳಿದ್ದರೆ, ಎಸ್ಐಟಿ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲು ಸಿದ್ಧವಾಗಿದೆ. ಸಾಕ್ಷಿದಾರರು ಮತ್ತು ಸಂಬಂಧಿತ ವ್ಯಕ್ತಿಗಳನ್ನು ಕರೆಯುತ್ತಾ ವಿಚಾರಣೆ ನಡೆಸಲಾಗುತ್ತಿದೆ. ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಮಾತ್ರ ಬಂಧನ ಸಾಧ್ಯ. ವಿಭಿನ್ನ ಹೇಳಿಕೆ ನೀಡಿದವರಿಗೆ ಮರು ವಿಚಾರಣೆ ನಡೆಸಿ ಹೊಸ ಸಾಕ್ಷ್ಯ ಸಿಕ್ಕರೆ ಪುನಃ ತನಿಖೆ ಮಾಡಲಾಗುತ್ತದೆ. ಬಿಎನ್ಎಸ್ ಸೆಕ್ಷನ್ 41 ಅಡಿಯಲ್ಲಿ ಬಂಧಿಸುವ ಸಾಧ್ಯತೆಯೂ ಇದೆ.
ಜಯಂತ್ ಮಾತನಾಡಿ, ತಾವು ಸಂಪೂರ್ಣ ಸಹಕಾರ ನೀಡುತ್ತಿದ್ದು ಅಗತ್ಯ ದಾಖಲೆಗಳನ್ನು ಒದಗಿಸಿದ್ದೇವೆ ಎಂದು ಹೇಳಿದ್ದಾರೆ. ಮನಫ್ ಮತ್ತು ಅಭಿಷೇಕ್ ಅವರನ್ನು ವಿಚಾರಣೆ ನಡೆಸಿ, ಅವರ ಹೇಳಿಕೆಗಳನ್ನು ದಾಖಲಿಸಿಕೊಂಡ ನಂತರ ವಾಪಸ್ ಕಳುಹಿಸಲಾಗಿದೆ. ಇಬ್ಬರ ಹೇಳಿಕೆಗಳನ್ನು ಇನ್-ಕ್ಯಾಮೆರಾದಲ್ಲಿ ದಾಖಲಾಗಿದ್ದು, ಅಭಿಷೇಕ್ ಅವರ ಲ್ಯಾಪ್ಟಾಪ್ ಮತ್ತು ಎರಡು ಮೊಬೈಲ್ ಫೋನ್ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬುರುಡೆ ತಂದ ಸೌಜನ್ಯ ಅವರ ಮಾವ ವಿಠ್ಠಲ ಗೌಡರನ್ನು ಬಂಗ್ಲೆಗುಡ್ಡಕ್ಕೆ ಕರೆಸಿ ಮಹಜರು ನಡೆಸಲಾಯಿತು. ಸುಮಾರು ಒಂದೂವರೆ ಗಂಟೆ ಕಾಲ ನಡೆದ ಮಹಜರು ವೇಳೆ ವಿಠ್ಠಲ ಗೌಡರಿಂದ ಹೇಳಿಕೆ ದಾಖಲಿಸಲ್ಪಟ್ಟಿತು. ಸುಮಾರು ಒಂದು ವರ್ಷ ಹಿಂದೆ, ವಿಠ್ಠಲ ಗೌಡ ಮತ್ತು ಪ್ರದೀಪ್ ಬುರುಡೆಯನ್ನು ಬಂಗ್ಲೆಗುಡ್ಡದ ಅರಣ್ಯದಲ್ಲಿ ಅಡಗಿಸಿಕೊಂಡಿದ್ದರು. ಮಧ್ಯೆ ದಟ್ಟ ಅರಣ್ಯದಲ್ಲಿ ಬೇರೆ ಜಾಗಕ್ಕೆ ಸಾಗಿಸಿ, ಬುರುಡೆಯನ್ನು ಚೀಲಕ್ಕೆ ತುಂಬುವ ವಿಡಿಯೋ ಕೂಡ ತೆಗೆದುಕೊಂಡಿದ್ದರು. ಮಹಜರು ವೇಳೆ ವಿಠ್ಠಲ ಗೌಡರು ಆ ಜಾಗವನ್ನು ಎಸ್ಐಟಿಗೆ ತೋರಿಸಿದ್ದಾರೆ. ಸದ್ಯ ಎಸ್ಐಟಿ ಎಲ್ಲರ ಹೇಳಿಕೆಗಳನ್ನು ದಾಖಲಿಸಿಕೊಂಡು ಪರಸ್ಪರ ಹೋಲಿಸಿ ಪರಿಶೀಲಿಸುತ್ತಿದೆ. ವ್ಯತ್ಯಾಸ ಕಂಡುಬಂದರೆ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುವ ಸಾಧ್ಯತೆ ಇದೆ.