ಬೆಂಗಳೂರು (ಸೆ.11): ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ರೂಪೇನಾ ಅಗ್ರಹಾರದಲ್ಲಿ ಪುರಾತನ ಮುನೇಶ್ವರ ಮೂರ್ತಿಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ದೇವಸ್ಥಾನವು ಗ್ರಾಮದ ಆರಾಧ್ಯ ದೈವವಾಗಿದ್ದು, ಪ್ರತಿವರ್ಷ ಗ್ರಾಮಸ್ಥರು ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುತ್ತಾರೆ. ಇಂದು ಬೆಳಿಗ್ಗೆ ಎಂದಿನಂತೆ ಪೂಜೆಗಾಗಿ ಗುಡಿಸಲಿನ ಮಂಟಪಕ್ಕೆ ಬಂದ ಗ್ರಾಮಸ್ಥರು, ಮೂರ್ತಿಗಳು ಒಡದಿರುವ ದೃಶ್ಯ ಕಂಡು ಆಘಾತಕ್ಕೊಳಗಾದರು.
ಸರ್ಕಾರಿ ಭೂಮಿಯಲ್ಲಿರುವ ಈ ಐತಿಹಾಸಿಕ ಮಂಟಪದಲ್ಲಿ ದಿನನಿತ್ಯ ಪೂಜೆ ನಡೆಯುತ್ತದೆ. ಪೂರ್ವಜರ ಪದ್ಧತಿಯಂತೆ ಇಂದು ಮೂರ್ತಿಗಳಿಗೆ ಆರತಿ ಬೆಳಗಲು ಬಂದಾಗ, ಮೂರ್ತಿಗಳು ಧ್ವಂಸಗೊಂಡಿರುವುದು ಬೆಳಕಿಗೆ ಬಂದಿದೆ. ಇದರಿಂದ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು. ಆಕ್ರೋಶಗೊಂಡ ಗ್ರಾಮಸ್ಥರು ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಶಾಸಕರಿಂದ ತಕ್ಷಣದ ಭೇಟಿ:
ಘಟನೆಯ ಸ್ಥಳಕ್ಕೆ ತಕ್ಷಣ ಭೇಟಿ ನೀಡಿದ ಶಾಸಕ ಸತೀಶ್ ರೆಡ್ಡಿ, “ಇದೊಂದು ಅಮಾನವೀಯ ಕೃತ್ಯ. ಕಿಡಿಗೇಡಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಕಂಡುಹಿಡಿಯಲು ಪೊಲೀಸರಿಗೆ ಮನವಿ ಮಾಡಿದ್ದೇನೆ,” ಎಂದರು.
ಧರ್ಮಸ್ಥಳ ಪ್ರಕರಣ: ಚಿನ್ನಯ್ಯನ ವಿಚಾರಣೆ ಮುಕ್ತಾಯ..ಆದ್ರೂ ತಪ್ಪದು ಸಂಕಷ್ಟ! ಬಂಧನವಾಗೋದು ಗ್ಯಾರಂಟಿನಾ?
ಮತಾಂಧರ ಕೃತ್ಯವೋ ಅಥವಾ ಭೂಮಾಫಿಯಾದ ಕೈವಾಡವೋ?
ಪುರಾತನ ದೇಗುಲದ ಧ್ವಂಸದ ಹಿಂದೆ ಹಲವು ಅನುಮಾನಗಳು ಕಾಡುತ್ತಿವೆ. ಈ ಕೃತ್ಯದ ಹಿಂದೆ ಮತಾಂಧರಿರಬಹುದೇ ಅಥವಾ ಭೂಮಾಫಿಯಾದ ಕೈವಾಡವಿರಬಹುದೇ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಈ ಮಂಟಪವು ಗ್ರಾಮದ ಐತಿಹಾಸಿಕ ಆರಾಧ್ಯ ಕ್ಷೇತ್ರವಾಗಿದ್ದು, ಪೊಲೀಸರು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ ಕಿಡಿಗೇಡಿಗಳನ್ನು ಪತ್ತೆಹಚ್ಚಲು ಕಾರ್ಯಪ್ರವೃತ್ತರಾಗಿದ್ದಾರೆ.